
ಮುಂಡಗೋಡ: ಕಳೆದ 17ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಊರಿಗೆ ಆಗಮಿಸಿದ ತಾಲ್ಲೂಕಿನ ಬಾಚಣಕಿ ಗ್ರಾಮದ ರಮೇಶ ಅಂಬ್ರೇನವರ ಅವರಿಗೆ ಸೋಮವಾರ ಅದ್ದೂರಿ ಸ್ವಾಗತ ಕೋರಲಾಯಿತು.
ಪಟ್ಟಣದ ಶಿವಾಜಿ ವೃತ್ತದಲ್ಲಿ ಹೂವುಗಳನ್ನು ಸುರಿಸುತ್ತ, ಜೈಕಾರಗಳನ್ನು ಕೂಗುತ್ತ, ಯೋಧ ರಮೇಶ ಅವರನ್ನು ಸ್ವಾಗತಿಸಿದರು. ವಯಸ್ಸಿನ ಹಂಗಿಲ್ಲದೇ ನೆರೆದ ಜನರೆಲ್ಲರೂ ಯೋಧನಿಗೆ ಕೈ ಕುಲುಕುತ್ತ ಅತೀವ ಸಂತಸ ವ್ಯಕ್ತಪಡಿಸಿದರು.
ದಂಪತಿ ಸಮೇತ ಯೋಧನಿಗೆ ಸ್ವಾಗತ ಕೋರಿ ಗೌರವಿಸಲಾಯಿತು. ಕೆಲ ಕಾಲ ಭಾರತಾಂಬೆಯ ಘೋಷಣೆಗಳು ಶಿವಾಜಿ ವೃತ್ತದಲ್ಲಿ ಮೊಳಗಿದವು. ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮೂಲಕ ಸ್ವಗ್ರಾಮ ಬಾಚಣಕಿವರೆಗೆ ತೆರೆದ ವಾಹನದಲ್ಲಿ ಕರೆದೊಯ್ಯಲಾಯಿತು. ಅಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು ಸಹ ಹೆಮ್ಮೆಯ ಯೋಧನಿಗೆ ಆತ್ಮೀಯ ಸ್ವಾಗತ ಕೋರಿದರು. ಗ್ರಾಮಕ್ಕೆ ಆಗಮಿಸಿದ ಹೆಮ್ಮೆಯ ಯೋಧನಿಗೆ ಸಂಭ್ರಮದಿಂದ ಸ್ವಾಗತಿಸಿದರು.
ಯೋಧ ರಮೇಶ ಮಾತನಾಡಿ, ‘ದೇಶದ ವಿವಿಧ ರಾಜ್ಯಗಳಲ್ಲಿ ಸೇನೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ. ದೇಶಸೇವೆ ಮಾಡುವಾಗ ಸಿಗುವ ಗೌರವ, ತೃಪ್ತಿ ವರ್ಣಿಸಲು ಸಾಧ್ಯವಿಲ್ಲ. ಇಷ್ಟು ವರ್ಷ ದೇಶ ಸೇವೆ ಮಾಡಿದ್ದು, ಇನ್ಮುಂದೆ ಗ್ರಾಮದ ಅಭಿವೃದ್ಧಿಗೆ ಕೈಲಾದ ಸಹಾಯ ಮಾಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.