ADVERTISEMENT

ಮುಂಡಗೋಡ | ವಿಜೃಂಭಣೆಯಿಂದ ಜರುಗಿದ ಮಾರಿಕಾಂಬೆ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:26 IST
Last Updated 5 ಫೆಬ್ರುವರಿ 2026, 6:26 IST
ಮುಂಡಗೋಡ ಪಟ್ಟಣದ ಮಾರಿಕಾಂಬಾ ದೇವಿಯ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು
ಮುಂಡಗೋಡ ಪಟ್ಟಣದ ಮಾರಿಕಾಂಬಾ ದೇವಿಯ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು   

ಮುಂಡಗೋಡ: ಸೂರ್ಯ ರಶ್ಮಿ ಕಳಶಕ್ಕೆ ಸ್ಪರ್ಶಿಸಿ, ಬಂಗಾರ ಬಣ್ಣದ ಕಿರಣಗಳು ಪ್ರತಿಫಲಿಸುತ್ತಿದ್ದವು. ಭವ್ಯ ರಥದಲ್ಲಿ ಅಲಂಕೃತಗೊಂಡಿದ್ದ ದೇವಿಯು, ಮಂದಸ್ಮಿತಳಾಗಿ ಆಶೀರ್ವದಿಸುತ್ತಿರುವುದನ್ನು ಕಣ್ತುಂಬಿಕೊಂಡ ಭಕ್ತರು, ಕೈಯಲ್ಲಿ ಹಿಡಿದಿರುವ ಹಗ್ಗವನ್ನು ಮುಂದಕ್ಕೆ ಎಳೆಯಲು ತುದಿಗಾಲಲ್ಲಿ ನಿಂತಿದ್ದರು. ಅವಧೂತ ರಾಜೇಂದ್ರ ಭಟ್ಟ ಅವರು ಪೂಜಾ ಕಾರ್ಯಗಳನ್ನು ಪೂರೈಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರ ಜಯಘೋಷಗಳ ಮಧ್ಯೆ, ಪಟ್ಟಣದ ಗ್ರಾಮದೇವಿ ಮಾರಿಕಾಂಬಾ ದೇವಿಯ ಏಳನೇ ಜಾತ್ರೆಯ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

ನಿಗದಿತ ಸಮಯಕ್ಕಿಂತ ತುಸು ತಡವಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರು ಹತ್ತಡಿ ಮುಂದೆ ಚಲಿಸುತ್ತಿದ್ದಂತೆ, ಭಕ್ತರ ಜಯಘೋಷಗಳು ಮುಗಿಲುಮುಟ್ಟಿದ್ದವು. ಉತ್ತತ್ತಿ, ಬಾಳೆಹಣ್ಣು ಎಸೆದು ಕೈಮುಗಿದರು. ಕೋಳಿಗಳನ್ನು ರಥದತ್ತ ತೂರಿ, ಕೆಲವು ಭಕ್ತರು ಹರಕೆ ಈಡೇರಿಸಿದರು. ರಥಬೀದಿಯ ಉದ್ದಕ್ಕೂ ರಂಗೋಲಿ ಬಿಡಿಸಿ, ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ಇಕ್ಕೆಲಗಳಲ್ಲಿ ಮನೆಯ ತಾರಸಿ, ಆವರಣದಲ್ಲಿ ಭಕ್ತರು ತಂಡೋಪತಂಡವಾಗಿ ನಿಂತು, ರಥೋತ್ಸವವನ್ನು ಕಣ್ತುಂಬಿಕೊಂಡರು. ಐದು ತಾಸು ನಡೆದ ರಥೋತ್ಸವದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಸಹ ತೇರನ್ನು ಭಕ್ತಿಯಿಂದ ಎಳೆದು ದೇವಿಗೆ ನಮಿಸಿದರು.

ಊಧೋ.. ಉಧೋ ಎನ್ನುವ ಭಕ್ತ ಸಮೂಹದ ಮಧ್ಯೆ, ಒಂದೇ ವೇಗದಲ್ಲಿ ಪಶ್ಚಿಮಾಭಿಮುಖವಾಗಿ ರಥ ಸಾಗಿತು. ರಥವನ್ನು ಎಳೆಯಲು ಭಕ್ತರು ತಾ ಮುಂದು, ನಾ ಮುಂದು ಎನ್ನುತ್ತ, ದೇವಿಯ ತೇರನ್ನು ಎಳೆದು ಪುಳಕಿತಗೊಂಡರು. ರಥೋತ್ಸವ ಆರಂಭಗೊಂಡು ಒಂದು ಗಂಟೆ ಕಳೆಯುವುದರೊಳಗೆ, ಭಕ್ತರ ಸಂಖ್ಯೆ ಇಮ್ಮಡಿಗೊಂಡಿತ್ತು. ಮಹಿಳೆಯರು ನೃತ್ಯ ಮಾಡುತ್ತ, ಭಕ್ತಿಭಾವವನ್ನು ಪ್ರದರ್ಶಿಸಿದರು.

ADVERTISEMENT

‘ಚಂಡೆವಾದ್ಯ, ಡೊಳ್ಳು ಕುಣಿತದ ತಂಡಗಳು ಮೆರವಣಿಗೆಗೆ ಕಳೆ ನೀಡಿದವು. ಬೊಂಬೆ ಮುಖವಾಡಗಳು ಜನರನ್ನು ಆಕರ್ಷಿಸಿದವು. ಚಂಡೆವಾದ್ಯದ ತಾಳಕ್ಕೆ ಸುಮ್ಮನೆ ಹೋಗುತ್ತಿದ್ದವರೂ ಕುಣಿಯುತ್ತಿದ್ದರು. ಮಹಿಳೆಯರೂ ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಬೊಂಬೆ ಮುಖವಾಡಗಳನ್ನು ಧರಿಸಿದ್ದ ತಂಡವರ ಜೊತೆ 'ಸೆಲ್ಫಿ' ತೆಗೆದುಕೊಳ್ಳುವರ ಸಂಖ್ಯೆಯೂ ಹೆಚ್ಚಿತ್ತು. ಮಕ್ಕಳು ಬೊಂಬೆಗಳ ಜೊತೆ ಸಂತಸದಿಂದ ಕುಣಿಯುತ್ತಿರುವ ದೃಶ್ಯ ಕಂಡುಬಂತು. ಮಹಿಳಾ ತಂಡದ ಡೋಲ್ ಶಬ್ದವು ಮೆರವಣಿಗೆ ಉದ್ದಕ್ಕೂ ಮಾರ್ದನಿಸಿತು. ಯುವಪಡೆಯ ಕುಣಿತ ಮೆರವಣಿಗೆಯಲ್ಲಿ ಮತ್ತಷ್ಟು ವಾದ್ಯ ಬಾರಿಸಲು ಹುಮ್ಮಸ್ಸು ನೀಡುತ್ತಿತ್ತು. ಮಧ್ಯಾಹ್ನ 1.45 ಗಂಟೆಗೆ ರಥದಿಂದ ದೇವಿಯನ್ನು ಜಾತ್ರಾ ಮಂಟಪದ ಗದ್ದುಗೆಗೆ ಕರೆದೊಯ್ಯಲಾಯಿತು. ಗುರುವಾರದಿಂದ ಹಣ್ಣು ಕಾಯಿ ಸೇವೆ ಆರಂಭವಾಗಲಿದೆ.

ಶಾಸಕ ಶಿವರಾಮ ಹೆಬ್ಬಾರ, ಮಾರಿಕಾಂಬಾ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರಮೇಶ ಕಾಮತ್ ಹಾಗೂ ಸದಸ್ಯರು, ಮಾಜಿ ಶಾಸಕ ವಿ.ಎಸ್‌.ಪಾಟೀಲ, ತಹಶೀಲ್ದಾರ್‌ ಶಂಕರ ಗೌಡಿ, ವೇದ ಮೂರ್ತಿ ರುದ್ರಮುನಿ ಸ್ವಾಮೀಜಿ ಪಾಲ್ಗೊಂಡಿದ್ದರು.

ಮಾರಿಕಾಂಬಾ ದೇವಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಕಲಾತಂಡಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.