
ಭಟ್ಕಳ (ಉತ್ತರ ಕನ್ನಡ): ತಾಲ್ಲೂಕಿನ ಮುರುಡೇಶ್ವರ–ಬೈಲೂರು ಮಾರ್ಗದ ತೆಂಗಾರ ರಸ್ತೆಯ ಅಕ್ಕಪಕ್ಕದ ಕೆಲ ಹಿಂದೂ ಮನೆಗಳ ಮೇಲೆ ಸೋಮವಾರ ರಾತ್ರಿ ಬೈಕ್ನಲ್ಲಿ ಬಂದ 7 ಮಂದಿ ಮುಸ್ಲಿಂ ಬಾಲಕರು ಕಲ್ಲುತೂರಾಟ ನಡೆಸಿದರು. ಇದರಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಕಲ್ಲು ತೂರಾಟದಿಂದ ಮನೆಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಘಟನೆ ವೇಳೆ ಸಿಕ್ಕಿಬಿದ್ದ ಇಬ್ಬರು ಬಾಲಕರನ್ನು ಜನರೇ ಪೊಲೀಸರಿಗೆ ಒಪ್ಪಿಸಿದರು. ಬಳಿಕ ಪೊಲೀಸರು ಇನ್ನೂ ಐವರು ಬಾಲಕರನ್ನು ವಶಕ್ಕೆ ಪಡೆದರು.
‘ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಈ ಎಲ್ಲರೂ ಮಾದಕವಸ್ತು ಸೇವಿಸಿದ್ದರು ಎಂಬುದು ದೃಢಪಟ್ಟಿದೆ. ಎಲ್ಲರನ್ನೂ ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಲುತೂರಾಟ ನಡೆಸಿದವರ ವಿರುದ್ಧ ಕ್ರಮ ಮತ್ತು ಅವರನ್ನು ಪ್ರಚೋದಿಸಿದವರ ಬಂಧನಕ್ಕೆ ಒತ್ತಾಯಿಸಿ ಮುರುಡೇಶ್ವರ ಠಾಣೆಯ ಮುಂಭಾಗ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
‘ಮುನ್ನೆಚ್ಚರಿಕೆಯಾಗಿ ಬೈಲೂರು ಮತ್ತು ಮುರುಡೇಶ್ವರ ಭಾಗದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಂತಿ ಸಭೆ ನಡೆಸಿ, ಸ್ಥಳೀಯರಲ್ಲಿ ಧೈರ್ಯ ಮೂಡಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನರು ವದಂತಿಗಳಿಗೆ ಕಿವಿಗೊಡಬಾರದು’ ಎಂದು ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.