ಕಾರವಾರ: ‘ಆಯುರ್ವೇದ ವೈದ್ಯ ಪದ್ಧತಿ ದೇಹಕ್ಕೆ ಹಾನಿ ಉಂಟುಮಾಡದೆ ಕಾಯಿಲೆಯನ್ನು ಪರಿಣಾಮಕಾರಿಯಾಗಿ ಗುಣಪಡಿಸುವ ಶಕ್ತಿ ಹೊಂದಿದೆ. ಪ್ರಾಚೀನ ಭಾರತದ ಈ ಪದ್ಧತಿ ಇಂದು ಜಗದಗಲಕ್ಕೆ ವ್ಯಾಪಿಸುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಆರ್ಯುವೇದ ಗಿಡಮೂಲಿಕೆ ಸಸಿಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಬಲಗೊಳಿಸುವ ಅಗತ್ಯವಿದೆ. ಅದರ ಮಹತ್ವವನ್ನು ಅರ್ಥ ಮಾಡಿಕೊಂಡು ಬದುಕಿನ ಭಾಗವಾಗಿ ಜೋಡಿಸಿಕೊಳ್ಳಬೇಕಿದೆ. ಕೋವಿಡ್ ಸಾಂಕ್ರಾಮಿಕ ಹರಡಿದ್ದ ಕಾಲದಲ್ಲಿ ಜನತೆಗೆ ಗಿಡಮೂಲಿಕೆಗಳ ಮಹತ್ವ ಹೆಚ್ಚು ಅರಿವಿಗೆ ಬಂತು’ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ ಮಾತನಾಡಿ, ‘ಅಡ್ಡ ಪರಿಣಾಮಗಳಿಲ್ಲದೇ ಉತ್ತಮ ಆರೋಗ್ಯ ಕಾಪಿಟ್ಟುಕೊಳ್ಳಲು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಅವಕಾಶವಿದೆ. ಗಿಡಮೂಲಿಕೆಗಳನ್ನೇ ಬಳಸಿಕೊಂಡು ತಯಾರಿಸಲಾದ ಔಷಧಗಳು, ಪ್ರಕೃತಿ ಮೂಲಕ ನೀಡುವ ಚಿಕಿತ್ಸೆಯಿಂದ ದೈಹಿಕ, ಮಾನಸಿಕ ಆರೋಗ್ಯ ಸುಧಾರಣೆ ಕಂಡುಕೊಳ್ಳುವ ವಿಧಾನಕ್ಕೆ ವಿದೇಶಿಯರು ಮಾರುಹೋಗುತ್ತಿದ್ದಾರೆ’ ಎಂದರು.
ಆಯುರ್ವೇದ ಜಾಗೃತಿ ಕುರಿತು ಉಪನ್ಯಾಸ ನೀಡಿದ ಹಿರಿಯ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ, ‘ರೋಗವನ್ನು ಗುಣಪಡಿಸುವುದಕ್ಕಿಂತ ರೋಗ ರಹಿತ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಯೋಗ ಮತ್ತು ಆರ್ಯುವೇದವನ್ನು ಇಂದು ಜಗತ್ತಿಗೆ ವಿಸ್ತರಿಸಲಾಗಿದೆ. ತಂದೆ ತಾಯಿಗಳು ಆರೋಗ್ಯವಂತರಾಗಿದ್ದರೆ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಬಹುದು’ ಎಂದರು.
ಆರ್ಯುವೇದ ತಜ್ಞವೈದ್ಯ ಡಾ.ಎಂ.ಎಸ್. ಅವಧಾನಿ, ‘ಆರ್ಯವೇದ ಕೇವಲ ಮನುಷ್ಯರಿಗೆ ಸಿಮಿತವಲ್ಲ, ಸಮಸ್ತ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಸಂಬಂಧಿಸಿದೆ. ಆಧುನಿಕ ವೈದ್ಯ ವಿಜ್ಞಾನಕ್ಕಿಂತ ಆರ್ಯವೇದಕ್ಕೆ ಅದ್ಬುತ ಶಕ್ತಿ ಇದೆ’ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಪ್ರವೀಣ ಜಿ.ಎನ್., ಆಯುಷ್ ಇಲಾಖೆಯ ಅಧೀಕ್ಷಕ ಸಂಜಿವಕುಮಾರ ನಾಯ್ಕ, ಡಾ.ಸಂಜೀವ್ ಗಲಗಲಿ ಇದ್ದರು.
ರಾಸಾಯನಿಕ ಮಿಶ್ರಿತ ಆಹಾರ ಒತ್ತಡದ ಜೀವನಶೈಲಿಯಿಂದ ಆರೋಗ್ಯ ಹದಗೆಡಿಸಿಕೊಳ್ಳುತ್ತಿರುವ ಜನತೆ ಅಪ್ಪಟ ಭಾರತೀಯ ವೈದ್ಯ ಪದ್ಧತಿಯಾದ ಆಯರ್ವೇದದ ಮೂಲಕ ಆರೋಗ್ಯಯುತ ಜೀವನ ಕಟ್ಟಿಕೊಳ್ಳಬಹುದುಗಣಪತಿ ಉಳ್ವೇಕರ್ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.