ಕಾರವಾರ: ‘ಡೆಂಗಿ ಜ್ವರದ ನಿಯಂತ್ರಣಕ್ಕೆ ಪರಿಸರದ ಸ್ವಚ್ಛತೆ ಅಗತ್ಯ. ಇದಕ್ಕೆ ಪೂರಕವಾಗಿ ಜನರ ಮನಸ್ಥಿತಿ ಬದಲಾಗಬೇಕು. ವಿಶೇಷವಾಗಿ ಮಕ್ಕಳಲ್ಲಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಹೇಳಿದರು.
ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ‘ರಾಷ್ಟ್ರೀಯ ಡೆಂಗಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಡೆಂಗಿ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಬೇಕು. ಈ ನಿಟ್ಟಿನಲ್ಲಿ ಜನ ಸಹಕರಿಸಬೇಕು. ಮನೆಯಲ್ಲಿ, ಸುತ್ತಮುತ್ತ ಸಂಗ್ರಹಿಸಿದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಮುಖ್ಯ’ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ಮಾತನಾಡಿ, ‘ನೀರು ನಿಂತಿರುವ ಜಾಗಗಳು, ಸಿಮೆಂಟ್ ತೊಟ್ಟಿಗಳು, ತೆಂಗಿನ ಚಿಪ್ಪು, ಟೈರ್, ಟ್ಯಾಂಕ್, ಮರಗಳ ಪೊಟರೆ, ಹೂ ಕುಂಡಗಳು, ಬಿದಿರಿನ ಬೇಲಿ, ಫ್ರಿಜ್ನ ನೀರು ಸಂಗ್ರಹದ ಟ್ರೇಗಳು ಮುಂತಾದ ಕಡೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇವುಗಳ ಬಗ್ಗೆ ನಿಗಾ ವಹಿಸಬೇಕು’ ಎಂದರು.
‘ಸಂಗ್ರಹಿಸಿ ಇಟ್ಟಿರುವ ನೀರನ್ನು ಮುಚ್ಚಿಡಬೇಕು. ಅದು ಸೊಳ್ಳೆಗಳ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಮೀಕ್ಷೆಗೆ ಮನೆಗೆ ಬಂದಾಗ ಮಾಹಿತಿ ನೀಡಬೇಕು. ಡೆಂಗಿಯು ಮಳೆಗಾಲದಲ್ಲಿ ಉಲ್ಬಣವಾಗದಂತೆ ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಹೇಳಿದರು.
ಕಾರವಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೂರಜಾ ನಾಯಕ, ಡಾ.ಅನ್ನಪೂರ್ಣಾ ವಸ್ತ್ರದ, ಡಾ.ಶಂಕರರಾವ್, ಜೋಸ್ನಾ ಕೈರನ್ನ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.