ಶಿರಸಿ: ‘ಮಳೆಯ ಕಾರಣಕ್ಕೆ ರಸ್ತೆಗಳು ಹದಗೆಟ್ಟಿವೆ. ರಾಷ್ಟ್ರೀಯ ಹೆದ್ದಾರಿ ಹೊಂಡಗುಂಡಿಗಳ ನಿರ್ವಹಣೆ ಸಂಬಂಧ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅವರದೇ ಪಕ್ಷದ ಶಾಸಕ ವಿ.ಸುನೀಲಕುಮಾರ ಅವರು, ರಸ್ತೆ ಅವ್ಯವಸ್ಥೆ ಬಗ್ಗೆ ಹೇಳಿಕೆ ನೀಡಿದ್ದು ಸರಿಯಲ್ಲ’ ಎಂದು ಶಾಸಕ ಭೀಮಣ್ಣ ನಾಯ್ಕ ಪ್ರತಿಕ್ರಿಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶಾಸಕ ವಿ.ಸುನೀಲಕುಮಾರ ಅವರು ಉಡುಪಿಯಿಂದ ಶಿರಸಿ ವರೆಗೆ ರಸ್ತೆ ಗುಂಡಿ ಬಿದ್ದಿರುವ ಬಗ್ಗೆ ಆಪಾದನೆ ಮಾಡಿದ್ದು, ಇಲ್ಲಿನ ಸಂಸದರಿಗೆ ಮಾಹಿತಿ ನೀಡಿದ್ದರೆ ಅದರ ನಿರ್ವಹಣೆಗೆ ಅನುಕೂಲ ಆಗುತ್ತಿತ್ತು. ಆ ರಸ್ತೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಸೇರುತ್ತದೆಯೇ? ಅಥವಾ ಕೇಂದ್ರ ಸರ್ಕಾರದ ಅಧೀನದಲ್ಲಿದೆಯೇ ಎಂಬುದನ್ನು ಮೊದಲು ಅರಿಯಬೇಕಿತ್ತು’ ಎಂದರು.
‘ಮಲೆನಾಡಿನಲ್ಲಿ ನಿರಂತರ ಮಳೆ ಇರುತ್ತದೆ. ರೈತರೂ ಕಂಗೆಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಗುಂಡಿ ಲೆಕ್ಕ ಹಾಕಿ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ‘ರಾಜ್ಯ ಸರ್ಕಾರಕ್ಕೆ ಸೇರಿದ ರಸ್ತೆಗಳ ದುರಸ್ತಿಗೆ ಹಣ ಬಿಡುಗಡೆಯಾಗಿದೆ. ಮಳೆ ಕಡಿಮೆಯಾದ ತಕ್ಷಣ ಕಾಮಗಾರಿ ನಡೆಯಲಿದೆ’ ಎಂದು ತಿಳಿಸಿದರು.
‘ಸಿ.ಎಂ ಸಿದ್ದರಾಮಯ್ಯ ಹಾಗೂ ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ. ಇದನ್ನು ಸಹಿಸದ ಬಿಜೆಪಿಗರು ವೃಥಾ ಆರೋಪ ಮಾಡುತ್ತ, ಕಾಂಗ್ರೆಸ್ ಸರ್ಕಾರ ಪತನದ ಹಗಲು ಕನಸು ಕಾಣುತ್ತಿದ್ದಾರೆ’ ಎಂದು ಟೀಕಿಸಿದರು.
‘ಕೇಂದ್ರಕ್ಕೆ ತುಂಬಿದ ಜಿಎಸ್ಟಿ ಪಾಲಿನಲ್ಲಿ ರಾಜ್ಯದ ಪಾಲು ಸರಿಯಾಗಿ ಕೊಟ್ಟಿದ್ದರೆ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಸಿಗುತ್ತಿತ್ತು. ಇದರ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ. ಕಾಂಗ್ರೆಸ್ ಭ್ರಷ್ಟ ಸರ್ಕಾರ ಎನ್ನುವ ಬಿಜೆಪಿಗರು ತಮ್ಮ ಇತಿಹಾಸದ ಪುಟವನ್ನು ಒಮ್ಮೆ ತಿರುವಿ ನೋಡಬೇಕು’ ಎಂದರು.
‘ಅರಣ್ಯ ಅತಿಕ್ರಮಣದಾರರ ಸಮಸ್ಯೆ ನಿವಾರಣೆಗೆ ಶಾಸಕನಾಗಿ ಆಯ್ಕೆಯಾದ ಮೊದಲ ಅಧಿವೇಶದಲ್ಲಿಯೇ ಧ್ವನಿ ಎತ್ತಿದ್ದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರ್ಣಯ ಆಗಬೇಕಿದ್ದು, ಇಲ್ಲಿನ ಸಂಸದರು ಧ್ವನಿ ಎತ್ತಬೇಕಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈ ವೇಳೆ ಪಕ್ಷದ ಎಸ್.ಕೆ.ಭಾಗವತ, ವೆಂಕಟೇಶ ಹೆಗಡೆ, ಜಗದೀಶ ಗೌಡ, ಗಣೇಶ ದಾವಣಗೆರೆ, ಗೀತಾ ಶೆಟ್ಟಿ, ಸುಮಾ ಉಗ್ರಾಣಕರ, ಪ್ರದೀಪ ಶೆಟ್ಟಿ, ದೇವರಾಜ ಮರಾಠಿ ಇದ್ದರು.
ಅಘನಾಶಿನಿ ವೇದಾವತಿ ನದಿ ತಿರುವು ಯೋಜನೆ ಅನುಷ್ಠಾನ ಮಾಡಲು ಜಿಲ್ಲೆಯ ಜನತೆ ಬಿಡುವುದಿಲ್ಲ. ಒಂದೊಮ್ಮೆ ಯೋಜನೆ ಅನುಷ್ಠಾನವಾಗುವ ಹಂತ ಬಂದರೆ ಆಗ ನಿಶ್ಚಿತವಾಗಿ ವಿರೋಧಿಸಲಾಗುವುದುಭೀಮಣ್ಣ ನಾಯ್ಕ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.