ಕಾರವಾರ: ಕೋವಿಡ್ ಪೀಡಿತರಾಗಿದ್ದ ಭಾರತೀಯ ನೌಕಾದಳದ ಉಪ ಅಡ್ಮಿರಲ್ ಶ್ರೀಕಾಂತ್ (60), ದೆಹಲಿಯ ಬೇಸ್ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಮೃತವೈಸ್ ಅಡ್ಮಿರಲ್ ಶ್ರೀಕಾಂತ್ ಅವರು ಪತ್ನಿ ಮತ್ತು ಪುತ್ರಿಯನ್ನುಅಗಲಿದ್ದಾರೆ.ಬೆಂಗಳೂರಿನ ಜಾಲಹಳ್ಳಿಯವರಾದ ಶ್ರೀಕಾಂತ್, ಕಾರವಾರದ ನೌಕಾನೆಲೆ ‘ಸೀಬರ್ಡ್ ಯೋಜನೆ’ಯ ಮಹಾ ನಿರ್ದೇಶಕರಾಗಿದ್ದರು. ಇದಕ್ಕೂ ಮೊದಲು ಅವರು ಅಣುಶಕ್ತಿ ಸುರಕ್ಷತೆಯ ಇನ್ಸ್ಪೆಕ್ಟರ್ ಜನರಲ್ ಹಾಗೂ ರಾಷ್ಟ್ರೀಯ ಭದ್ರತಾ ಕಾಲೇಜಿನ ಕಮಾಂಡೆಂಟ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
ನೌಕಾದಳದ ಸಬ್ ಮರೀನ್ ವಿಭಾಗದ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದ ಅವರು, ಡಿ.31ರಂದು ನಿವೃತ್ತಿ ಹೊಂದಲಿದ್ದರು. ಸಶಸ್ತ್ರ ಪಡೆಗೆ ಸೇರುವ ಮೊದಲು ಅವರು ವಿಜಯಪುರದ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದಿದ್ದರು.
ಅವರ ನಿಧನಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಶ್ರದ್ಧಾಂಜಲಿ ಸಲ್ಲಿಸಿದ್ದು, ‘ಸೀಬರ್ಡ್ ಯೋಜನೆಯ ಮಹಾ ನಿರ್ದೇಶಕ, ಉಪ ಅಡ್ಮಿರಲ್ ಶ್ರೀಕಾಂತ್ ಅವರ ಅಕಾಲಿಕ ಮರಣದಿಂದ ಬಹಳ ನೋವಾಗಿದೆ. ದೇಶಕ್ಕಾಗಿ ಅವರ ಸೇವೆಯನ್ನು ರಕ್ಷಣಾ ಸಚಿವಾಲಯ ಮತ್ತು ಭಾರತೀಯ ನೌಕಾಪಡೆಯು ಸದಾ ನೆನಪಿಸಿಕೊಳ್ಳುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.