ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆಗೆ ವಿರೋಧ ಸಲ್ಲದು. ಈ ಯೋಜನೆ ಮುಂದುವರಿದು ಯುವಕರಿಗೆ ಉದ್ಯೋಗ ಲಭಿಸಬೇಕು ಎಂದು ಉತ್ತರ ಕರ್ನಾಟಕ ಮಹರ್ಷಿ ವಾಲ್ಮೀಕಿ ಕಾರ್ಮಿಕರ ಬೆಟರ್ಮೆಂಟ್ ಮತ್ತು ವೆಲ್ಫೇರ್ ಸಂಘದ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಖಲೀಮ್ ಅಚ್ರೇಕರ್, ‘ಇತ್ತೀಚೆಗೆ ಉದ್ಯೋಗಾವಕಾಶ ಪಡೆದುಕೊಳ್ಳುವುದು ಅತ್ಯಂತ ಕಠಿಣವಾಗಿದೆ. ಇಂತಹ ಸಂದರ್ಭದಲ್ಲಿಕೆಲವರು ಸ್ಥಾವರದ ಐದು ಮತ್ತು ಆರನೇ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೈಗಾ, ಮಲ್ಲಾಪುರ ಹಾಗೂ ಕಾರವಾರದ ಮುಗ್ಧ ಜನರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ’ ಎಂದು ದೂರಿದರು.
‘ನಾವು ಏನನ್ನಾದರೂ ಪಡೆದುಕೊಳ್ಳಲು ಮತ್ತೇನನ್ನಾದರೂ ಕಳೆದುಕೊಳ್ಳಬೇಕು. ಕೈಗಾ ಅಣು ವಿದ್ಯುತ್ ಸ್ಥಾವರವು ಪರಿಸರಕ್ಕೆ ದೊಡ್ಡ ಬೆದರಿಕೆ ಎಂಬುದನ್ನು ಸಂಘವು ಒಪ್ಪುತ್ತದೆ. ಆದರೆ, ಈಗಾಗಲೇ ನಾಲ್ಕು ಘಟಕಗಳು ಚಾಲನೆಯಲ್ಲಿವೆ. ಮುಂದೆ ಎರಡು ಘಟಕಗಳ ಸ್ಥಾಪನೆಯ ಸಂದರ್ಭ ಮತ್ತು ಆನಂತರ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗದಂತೆ ತಡೆಯಲು ಅಗತ್ಯ ಕ್ರಮಗಳ ಬಗ್ಗೆ ಸದಸ್ಯರೆಲ್ಲರೂ ಜೊತೆಯಾಗಿ ಚರ್ಚಿಸುತ್ತೇವೆ’ ಎಂದು ಹೇಳಿದರು.
‘ಎಲ್ಲ ನಿರುದ್ಯೋಗಿ ಯುವಕ ಮತ್ತು ಯುವತಿಯರ ಪರವಾಗಿ ಯೋಜನೆಯನ್ನು ಸ್ವಾಗತಿಸುತ್ತೇವೆ’ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ಯಾಮ್ ವಾಲ್ಮೀಕಿ, ಉಪಾಧ್ಯಕ್ಷ ಪ್ರಶಾಂತ ಎಸ್.ವಾಲ್ಮೀಕಿ, ಮಂಜುನಾಥ ರೇವಣಕರ್ ಹಾಗೂ ಮೆಹಬೂಬ್ ಪೀರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.