ಸಿದ್ದಾಪುರ: ಕಳೆದ ವರ್ಷ ಮಳೆಗಾಲದಲ್ಲಿ ತಾಲ್ಲೂಕಿನ ಮಾವಿನಗುಂಡಿ-ಹೊನ್ನಾವರ (ಎನ್ಎಚ್ 206 ) ರಸ್ತೆಯ ಘಟ್ಟ ಪ್ರದೇಶದಲ್ಲಿ ಉಂಟಾಗಿದ್ದ ರಸ್ತೆ ಕುಸಿತದ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಯದೇ ಇರುವುದರಿಂದ ಬೇಸತ್ತ ಹೊನ್ನಾವರ ತಾಲ್ಲೂಕಿನ ಗುಂಡಬಾಳಾದ ರಾಜೇಶ ಶೇಟ್ ಎಂಬವರು ಜಾಗ ಮಾರಾಟಕ್ಕಿದೆ ಎಂಬ ಒಕ್ಕಣೆ ಇರುವ ಪ್ರಿಂಟೌಟ್ ಒಂದನ್ನು ಅಂಟಿಸುವ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಾಧ್ಯಮದ ಮೂಲಕ ಮನವಿಯನ್ನೂ ಮಾಡಿರುವ ಅವರು, ‘ಇಲ್ಲಿ ಕುಸಿತ ಉಂಟಾಗಿ ಒಂದೂವರೆವರ್ಷವಾಗಿದೆ. ಈ ಬಗ್ಗೆ ಅನೇಕ ಸಲ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿಗೆ ದೂರು ಸಲ್ಲಿಸಿದ್ದೇನೆ. ಶಿರಸಿ-ಕುಮಟಾ ಮಾರ್ಗ ಬಂದ್ ಆದಲ್ಲಿ, ಮಾವಿನಗುಂಡಿ ರಸ್ತೆಯು ಹೊನ್ನಾವರಕ್ಕೆ ಹಾಗೂ ಸಿದ್ದಾಪುರಕ್ಕೆ ಪ್ರಮುಖ ಮಾರ್ಗವಾಗಿರುತ್ತದೆ. ಆದ್ದರಿಂದ ಇದರ ದುರಸ್ತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿʼ ಎಂದು ಅವರು ಆಗ್ರಹಿಸಿದ್ದಾರೆ.
'ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್ಎಚ್ 206 ಅನ್ನು ಸಂಪೂರ್ಣವಾಗಿ ಮರೆತಂತಿದೆ. ಚಾರ್ಮಾಡಿ ಘಟ್ಟವನ್ನು 6 ತಿಂಗಳಿಗೊಮ್ಮೆ ದುರಸ್ತಿ ಮಾಡಲಾಗುತ್ತದೆ. ಆದರೆ ಮಾವಿನಗುಂಡಿ ಘಟ್ಟದ ರಸ್ತೆಯಲ್ಲಿ ಮರ ಬಿದ್ದರೆ 15 ದಿನಗಳಾದರೂ ತೆರವುಗೊಳಿಸುವುದಿಲ್ಲ.ಇದೀಗ ಶಿರಸಿ-ಕುಮಟಾ ರಸ್ತೆ ಕಾಮಗಾರಿಯ ಕಾರಣದಿಂದ ಮಾವಿನಗುಂಡಿ ಘಟ್ಟದಲ್ಲಿ ಭಾರಿ ವಾಹನಗಳ ಓಡಾಟವೂ ಪ್ರಾರಂಭವಾಗಿದೆ. ಅದರೊಂದಿಗೆ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ (1033)ಯನ್ನು ಸಂಪರ್ಕಿಸುವುದು ಕೂಡ ದೊಡ್ಡ ಸಾಹಸವಾಗಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.