ADVERTISEMENT

ಕೈಗಾ ಹೊಸ ಘಟಕ ನಿರ್ಮಾಣ ಕೈಬಿಡಲು ಒತ್ತಾಯ

ಸ್ವರ್ಣವಲ್ಲಿಯಲ್ಲಿ ಪರಿಸರ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 17:19 IST
Last Updated 6 ಡಿಸೆಂಬರ್ 2018, 17:19 IST
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ನಡೆದ ಸಭೆಯಲ್ಲಿ ಕೈಗಾ ವಿರೋಧಿ ಹೋರಾಟದ ಪ್ರಮುಖ ಮಲ್ಲಾಪುರದ ಗುರುದತ್ತ ಫಾಯದೆ ಮಾತನಾಡಿದರು
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ನಡೆದ ಸಭೆಯಲ್ಲಿ ಕೈಗಾ ವಿರೋಧಿ ಹೋರಾಟದ ಪ್ರಮುಖ ಮಲ್ಲಾಪುರದ ಗುರುದತ್ತ ಫಾಯದೆ ಮಾತನಾಡಿದರು   

ಶಿರಸಿ: ಪಶ್ಚಿಮಘಟ್ಟದ ಕಾಳಿ ಕಣಿವೆಯ ಕೈಗಾದಲ್ಲಿ ಅಣುವಿದ್ಯುತ್ 5-6ನೇ ಘಟಕ ಸ್ಥಾಪನೆ ಕೈ ಬಿಡಬೇಕು ಎಂದು ಗುರುವಾರ ತಾಲ್ಲೂಕಿನ ಸ್ವರ್ಣವಲ್ಲಿ ಮಠದಲ್ಲಿ ನಡೆದ ಪರಿಸರ ಕಾರ್ಯಕರ್ತರ ಸಭೆ ಒತ್ತಾಯಿಸಿದೆ.

ಉದ್ದೇಶಿತ ಯೋಜನೆಯ ಪರಿಸರ ಪರಿಣಾಮ ವರದಿ ಸುಳ್ಳು ಮಾಹಿತಿಗಳಿಂದ ಕೂಡಿದೆ. ಅರಣ್ಯ ನಾಶ, ಈವರೆಗಿನ ದುಷ್ಪರಿಣಾಮಗಳು ಇತ್ಯಾದಿ ಸಂಗತಿಗಳ ಬಗ್ಗೆ ಮಾಹಿತಿ ನೀಡಿಲ್ಲ. ಪರಿಸರ ವರದಿ ತಯಾರಿಸಿದ ಮೆಕಾನ್ ಕಂಪನಿಗೆ ಈ ವರದಿ ತಯಾರಿಸುವ ಅರ್ಹತೆ ಇಲ್ಲ. ಈ ವರದಿಯನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಪರಿಸರ ಕಾರ್ಯಕರ್ತರು ಆಗ್ರಹಿಸಿದ್ದಾರೆ.

‘ಪರಮಾಣು ವಿದ್ಯುತ್ ದುಬಾರಿ, ಅಪಾಯಕಾರಿ, ಮುಂದಿನ ಪೀಳಿಗೆಗೆ ಹೆಮ್ಮಾರಿಯಾಗಿದೆ. ಕೈಗಾದ ಅಪಾಯಕಾರಿ ಅಣುತ್ಯಾಜ್ಯ ಉಡಿಯಲ್ಲಿ ಇಟ್ಟುಕೊಂಡ ಕೆಂಡದಂತೆ. ಅಣು ವಿದ್ಯುತ್ ಘಟಕ ವಿಸ್ತರಣೆ ಕೈಬಿಟ್ಟು ಸೋಲಾರ್ ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಬೇಕು. ಪಶ್ಚಿಮ ಘಟ್ಟದಲ್ಲಿ ಬೃಹತ್ ಅರಣ್ಯ ನಾಶದ ಯೋಜನೆ ಕೈಗೆತ್ತಿಕೊಳ್ಳಬಾರದು. ನದಿ ಮಾಲಿನ್ಯ ತಡೆಗಟ್ಟಲು, ನದಿ ಕಣಿವೆ ಸಂರಕ್ಷಿಸಲು ಕೇಂದ್ರ, ರಾಜ್ಯ ಸರ್ಕಾರಗಳು ವಿಶೇಷ ಯೋಜನೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿ, ಸಭೆ ನಿರ್ಣಯ ಸ್ವೀಕರಿಸಿದೆ.

ADVERTISEMENT

ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಇಂಧನ ತಜ್ಞ ಡಾ.ಶಂಕರ ಶರ್ಮಾ, ಪರಿಸರ ಕಾನೂನು ಅಧ್ಯಯನ ಕೇಂದ್ರದ ಪ್ರಮುಖ ಡಾ.ಮಹಾಬಲೇಶ್ವರ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.