ADVERTISEMENT

ಕಾರವಾರ: ಗದ್ದೆಗೆ ಹರಿಯದ ಹಳ್ಳದ ನೀರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 12:15 IST
Last Updated 14 ಸೆಪ್ಟೆಂಬರ್ 2020, 12:15 IST
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಬಣಗೆ ಹಳ್ಳಕ್ಕೆ ನಿರ್ಮಿಸಿರುವ ಬಾಂದಾರ
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಬಣಗೆ ಹಳ್ಳಕ್ಕೆ ನಿರ್ಮಿಸಿರುವ ಬಾಂದಾರ   

ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಬಣಗೆಯಲ್ಲಿ ಹಳ್ಳದ ನೀರು ಸಮೀಪದ ಭತ್ತದ ಗದ್ದೆಗಳಿಗೆ ತಲುಪುತ್ತಿಲ್ಲ. ಇದರಿಂದ ಬೆಳೆ ಹಾನಿಯಾಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಗ್ರಾಮದಲ್ಲಿ ಹೆಚ್ಚಿನ ರೈತರು ಭತ್ತ ಬೆಳೆಯುತ್ತಾರೆ. ಆದರೆ, ಸಮೀಪದಲ್ಲೇ ಹಳ್ಳದ ನೀರು ಯಥೇಚ್ಛವಾಗಿ ಹರಿಯುತ್ತಿದ್ದರೂ ಗದ್ದೆಗೆ ಸಿಗುತ್ತಿಲ್ಲ. ಸಸಿಗಳಿಗೆ ಹಾಕಿದ ಗೊಬ್ಬರವೂ ಕರಗುತ್ತಿಲ್ಲ. ಬಣಗೆ ಹಳ್ಳಕ್ಕೆ ಐದು ವರ್ಷಗಳ ಹಿಂದೆ ಬಾಂದಾರ ನಿರ್ಮಿಸಲಾಗಿದೆ. ಆದರೆ, ಗದ್ದೆಗಳತ್ತ ಕಾಲುವೆ ನಿರ್ಮಿಸದೇ ಕಲ್ಲಿನಿಂದ ಪಿಚ್ಚಿಂಗ್ ಮಾತ್ರ ನಿರ್ಮಿಸಲಾಗಿದೆ. ಈಚೆಗೆ ಜೋರಾದ ಮಳೆಗೆ ಅದು ಕೂಡ ಕೊಚ್ಚಿಕೊಂಡು ಹೋಗಿದೆ. ಇದರ ಪರಿಣಾಮ ನೀರು ಪುನಃ ಹಳ್ಳದ ಕಡೆಗೇ ಹೋಗುತ್ತಿದೆ ಎಂದು ರೈತರಾದ ಜಯವಂತ ಗೌಡ, ಗೋವಿಂದ ಗೌಡ, ಥಾಕು ಗೌಡ, ಚಂದ್ರಕಾಂತ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

‘ನಮ್ಮ ಗ್ರಾಮದ ರೈತರಿಗೆ ಯಾವುದೇ ಬೆಳೆ ಬೆಳೆಯಲು, ಫಸಲು ಕೈಗೆ ಸಿಗಲು ನೀರಿನ ಅವಶ್ಯಕತೆಯಿದೆ. ಈ ಸಂಬಂಧ ಬಣಗೆ ಹಳ್ಳದ ಸಮೀಪ ಒಂದು ಭಾಗದ ಕಡೆ ಅಂದಾಜು 800 ಮೀಟರ್ ಕಾಂಕ್ರೀಟ್ ಕಾಲುವೆ ನಿರ್ಮಿಸುವುದು ಸೂಕ್ತ. ಅಧಿಕಾರಿಗಳು ಇದನ್ನು ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.