ಶಿರಸಿ: ಅನ್ನದ ಹಿಂದಿನ ರೈತರ ಶ್ರಮ ಹಾಗೂ ಭತ್ತದ ನಾಟಿಯ ಎಲ್ಲ ಹಂತಗಳ ಪರಿಚಯದ ಉದ್ದೇಶದಿಂದ ತಾಲ್ಲೂಕಿನ ಪಂಚಲಿಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶುಕ್ರವಾರ ಗದ್ದೆಗಿಳಿದು ಭತ್ತದ ನಾಟಿ ಕಾರ್ಯ ನಡೆಸಿದರು.
ಶಾಲೆಯ ಮುಖ್ಯಶಿಕ್ಷಕಿ ಶೋಭಾ ಕಾನಡೆ, ಶಿಕ್ಷಕರಾದ ಚಿತ್ರಾ ಪೈ ಹಾಗೂ ರೇಷ್ಮಾ ಅವರ ಮಾರ್ಗದರ್ಶನದಲ್ಲಿ ಶಾಲೆಯ 37 ವಿದ್ಯಾರ್ಥಿಗಳು ಭತ್ತದ ಸಸಿಗಳ ನಾಟಿ ಕಾರ್ಯದಲ್ಲಿ ತೊಡಗಿಕೊಂಡರು. 20 ದಿನಗಳ ಹಿಂದೆ ಪಾಲಕರ ಸಹಾಯದಿಂದ ಭತ್ತದ ಬೀಜಗಳನ್ನು ಸೋಕಿ ಅಗೆ ಮಡಿ ಮಾಡಿಕೊಂಡಿದ್ದ ಮಕ್ಕಳು ಅವುಗಳನ್ನು ಕಿತ್ತು ಗದ್ದೆಯಲ್ಲಿ ನಾಟಿ ಮಾಡಿದರು. ಕೆಲ ಪಾಲಕರು ಆರಂಭದಿಂದಲೂ ಮಾರ್ಗದರ್ಶನ ನೀಡಿದ್ದರು. ನಾಟಿ ಮಾಡಿದ ಸಸಿಗಳಿಗೆ ಜೀವಾಮೃತ ನೀಡಲು ಜೀವಾಮೃತ ತಯಾರಿಕೆ ಪ್ರಾತ್ಯಕ್ಷಿಕೆಯೂ ನಡೆಯಿತು. ಮಕ್ಕಳು ರಾಡಿಯಾದ ಗದ್ದೆಯಲ್ಲಿ ಸಸಿ ನಾಟಿ ಮಾಡಿ ಸಂಭ್ರಮಿಸಿದರು.
‘ಅನ್ನವು ನಮ್ಮವರೆಗೆ ಬರಲು ಎಷ್ಟು ರೀತಿಯ ಕಷ್ಟಗಳು, ಸವಾಲುಗಳಿರುತ್ತವೆ ಎಂಬುದನ್ನು ಮಕ್ಕಳಿಗೆ ತೋರಿಸಿಕೊಡುವ ಉದ್ದೇಶದಿಂದ ಶಾಲೆಯ ಆವರಣದಲ್ಲಿಯೇ ಸಸಿ ಮಡಿ ಹಾಕಲು ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಪ್ರತಿ ಮಗುವಿಗೂ ಅನ್ನದ ಬಗೆಗೆ ಗೌರವ ಹೆಚ್ಚಿದೆ. ಮುಂಬರುವ ದಿನಗಳಲ್ಲಿ ಕೊಯ್ಲು ಕೂಡ ಮಕ್ಕಳೇ ಮಾಡುವರು’ ಎಂದು ಶಾಲೆಯ ಶಿಕ್ಷಕಿ ಚಿತ್ರಾ ಪೈ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.