ಕಾರವಾರ: ನಗರಸಭೆ ವ್ಯಾಪ್ತಿಯಲ್ಲೇ ಇರುವ ಗುಡ್ಡಳ್ಳಿಗೆ ಸಮರ್ಪಕ ರಸ್ತೆ ಸಂಪರ್ಕವಿಲ್ಲದೇ ಸ್ಥಳೀಯರು ಪರದಾಡುತ್ತಿದ್ದಾರೆ. ಅನಾರೋಗ್ಯ ಪೀಡಿತ, 64 ವರ್ಷದ ಹಿರಿಯ ಮಹಿಳೆಯೊಬ್ಬರನ್ನು ಸಂಬಂಧಿಕರು ಸೋಮವಾರ, ಜೋಳಿಗೆಯಲ್ಲಿ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಟ್ಟದ ಮೇಲಿರುವ ಈ ಪ್ರದೇಶವು ನಗರಸಭೆಯ 31ನೇ ವಾರ್ಡ್ನಲ್ಲಿದೆ. ನಗರದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿದೆ. ಅರಣ್ಯದಿಂದ ಕೂಡಿರುವ ಈ ಪ್ರದೇಶದಲ್ಲಿದ್ದ ಕಚ್ಚಾ ರಸ್ತೆಯಲ್ಲಿ ಕಳೆದ ಮಳೆಗಾಲ ದೊಡ್ಡ ಹೊಂಡಗಳು ಉಂಟಾದವು. ಈಗ ಅಲ್ಲಿಗೆ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಮರದ ಕೋಲಿಗೆ ಚಾದರವನ್ನು ಜೋಳಿಗೆಯಂತೆ ಕಟ್ಟಿದ ಸಂಬಂಧಿಕರು, ಮಹಿಳೆಯನ್ನು ಅದರಲ್ಲಿ ಮಲಗಿಸಿದರು. ಬಳಿಕ ಹೆಗಲ ಮೇಲೆ ಹೊತ್ತುಕೊಂಡು ಕಾರವಾರಕ್ಕೆ ಬಂದು ಆಸ್ಪತ್ರೆಯೊಂದರಲ್ಲಿ ತುರ್ತು ಚಿಕಿತ್ಸೆ ಕೊಡಿಸಿದರು. ಬಳಿಕ ಮಂಗಳೂರಿಗೆ ಕಳುಹಿಸಿಕೊಟ್ಟರು.
ಎರಡು ದಿನಗಳ ಹಿಂದೆಯೂ ಅನಾರೋಗ್ಯ ಪೀಡಿತ 23 ವರ್ಷದ ಯುವಕರೊಬ್ಬರನ್ನು ಇದೇ ರೀತಿ ಕರೆದುಕೊಂಡು ಬಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
‘ಗುಡ್ಡಳ್ಳಿಯು ಅರಣ್ಯ ಪ್ರದೇಶದಲ್ಲಿದೆ. ಅಲ್ಲಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಪ್ರಭಾರ ಆಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.