ಕುಮಟಾ: ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ತಾಲ್ಲೂಕಿನ ಬೊಗರಿಬೈಲ ಗ್ರಾಮದ ಜನ ಕಷಾಯದ ಮೊರೆ ಹೋಗುತ್ತಿದ್ದಾರೆ.
ಕೊರೊನಾದಂತಹ ವೈರಸ್ ಸೋಂಕು ಅಂಟದಂತೆ ತಡೆಯಲು ಹಾಗೂ ಒಂದುವೇಳೆ ಪೀಡಿತರಾದರೆ ಬೇಗ ಗುಣಮುಖರಾಗಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮುಖ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ.
‘ಕೊರೊನಾ ಭಯದಲ್ಲಿ ಜನರನ್ನು ಗೃಹಬಂಧಿ ಮಾಡಿರುವುದರಿಂದ ಸಾಮಾನ್ಯ ಜ್ವರ ಬಂದರೂ ಕುಟುಂಬ ವೈದ್ಯರಲ್ಲಿ ಹೋಗಲಾರದ ಸ್ಥಿತಿ ಉಂಟಾಗಿದೆ. ಸರ್ಕಾರ ವಿಧಿಸಿದ ನಿರ್ಬಂಧ ಪಾಲಿಸುವುದರೊಂದಿಗೆ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳುವುದು ಈಗ ಗ್ರಾಮೀಣ ಜನರಿಗೆ ಸವಾಲಾಗಿ ಪರಿಣಮಿಸಿದೆ’ ಎಂದು ಊರಿನ ಪ್ರಗತಿಪರ ಕೃಷಿಕ ಜಗದೀಶ್ ನಾಯ್ಕ ಅಭಿಪ್ರಾಯ ಪಡುತ್ತಾರೆ.
‘ಕೊರೊನಾ ಕಷಾಯಕ್ಕೆ ನೆಲ ನೆಲ್ಲಿ, ಒಂದೆಲಗ, ತುಳಸಿ, ಬೇವು, ಶುಂಠಿ, ಅರಶಿನ, ಲಿಂಬೆಯನ್ನು ಬಳಸುತ್ತಾರೆ. ಇವುಗಳ ಕಷಾಯ ಹೊಸದೇನೂ ಅಲ್ಲ. ಪಾರಂಪರಿಕವಾಗಿ ಗ್ರಾಮೀಣ ಭಾಗದಲ್ಲಿ ಇದನ್ನು ಜ್ವರ ಹಾಗೂ ನೆಗಡಿ, ಕೆಮ್ಮು, ಕಫ ಸಮಸ್ಯೆ ಇದ್ದವರಿಗೆ ಕೊಡುತ್ತಿದ್ದರು. ಇದನ್ನು ನಿಯಮಿತವಾಗಿ ನಿರಂತರವಾಗಿ ಸೇವಿಸುತ್ತಿದ್ದವರ ರೋಗ ನಿರೋಧಕ ಶಕ್ತಿ ಹಚ್ಚಾಗುತ್ತದೆ’ ಎಂದು ಹೇಳಿದರು.
‘ಈ ಕಷಾಯಕ್ಕೆ ಬೇಕಾಗುವ ಔಷಧಿ ಸಸ್ಯಗಳು ಮನೆಯ ತೋಟದಲ್ಲಿ ಸಿಗುತ್ತವೆ. ಆದ್ದರಿಂದ ಕಷಾಯದ ವೆಚ್ಚ ಕೂಡ ತೀರಾ ಕಡಿಮೆ.ಮೂಲಿಕೆಗಳ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಶುಂಠಿ, ಅರಿಶಿನ, ಲಿಂಬೆ, ಬೆಲ್ಲ ಹಾಕಿ ಕುದಿಸಿ, ಆರಿಸಿ ಮಲಗುವ ಮುನ್ನ ಮನೆಯ ಸದಸ್ಯರು ಕುಡಿಯಬಹುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.