ADVERTISEMENT

ತೀವ್ರ ಸ್ವರೂಪ ಪಡೆಯುತ್ತಿರುವ ಹೋರಾಟ

ಅಘನಾಶಿನಿ ಕಣಿವೆ ಅರಣ್ಯ ಪ್ರದೇಶ ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 12:15 IST
Last Updated 6 ಜುಲೈ 2019, 12:15 IST
ಅಘನಾಶಿನಿ ಕಣಿವೆ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸಿದ್ದನ್ನು ವಿರೋಧಿಸಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಶಿರಸಿಯಲ್ಲಿ ಶನಿವಾರ ಪರಿಸರ ಕಾರ್ಯಕರ್ತರ ಸಭೆ ನಡೆಯಿತು
ಅಘನಾಶಿನಿ ಕಣಿವೆ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸಿದ್ದನ್ನು ವಿರೋಧಿಸಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಶಿರಸಿಯಲ್ಲಿ ಶನಿವಾರ ಪರಿಸರ ಕಾರ್ಯಕರ್ತರ ಸಭೆ ನಡೆಯಿತು   

ಶಿರಸಿ: ಅಘನಾಶಿನಿ ಕಣಿವೆ ಅರಣ್ಯ ಪ್ರದೇಶವನ್ನು ಶಿವಮೊಗ್ಗದ ಶರಾವತಿ ಅಭಯಾರಣ್ಯಕ್ಕೆ ಸೇರಿಸಿರುವ ಸರ್ಕಾರದ ಆದೇಶ ರದ್ದುಪಡಿಸುವಂತೆ, ಕಣಿವೆ ಜನರು‌ ನಡೆಸಿರುವ ಹೋರಾಟ ಬೃಹತ್ ಸ್ವರೂಪ ತಾಳುತ್ತಿದೆ.

ಸಿದ್ದಾಪುರ ತಾಲ್ಲೂಕು ಹೇರೂರು ಬಳಿ ನೆಲೆಮಾವು ಮಠದ ಸಭಾಭವನದಲ್ಲಿ ಜುಲೈ 10ರ ಮಧ್ಯಾಹ್ನ 3ಕ್ಕೆ ಅಘನಾಶಿನಿ ಉಳಿಸಿ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶಕ್ಕೆ ಬೇಡ್ತಿ ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿ ಗೌರವ ಅಧ್ಯಕ್ಷ, ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರೊ.ಬಿ.ಎಂ.ಕುಮಾರಸ್ವಾಮಿ, ಪ್ರೊ.ಸುಭಾಸ್‍ಚಂದ್ರನ್, ಡಾ.ಕೇಶವ ಕೊರ್ಸೆ ಮೊದಲಾದ ತಜ್ಞರು ಭಾಗವಹಿಸುವರು.

ಸಿದ್ದಾಪುರ ತಾಲ್ಲೂಕಿನ ಜನಪ್ರತಿನಿಧಿಗಳು, ಹಲವಾರು ಸಾಮಾಜಿಕ, ಧಾರ್ಮಿಕ ಗಣ್ಯರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಅಘನಾಶಿನಿ ಕಣಿವೆ ಸಂರಕ್ಷಣಾ ಹೋರಾಟ ಸಮಿತಿ, ಬೇಡ್ತಿ-ಅಘನಾಶಿನಿ ಕೊಳ್ಳ ಸಮಿತಿ, ನೆಲಮಾವು ಮಠ, ಸಿದ್ಧಿವಿನಾಯಕ ದೇವಾಲಯ ಹೇರೂರು ಇವುಗಳ ಸಹಯೋಗದಲ್ಲಿ ಸಮಾವೇಶ ನಡೆಯಲಿದೆ.

ADVERTISEMENT

ಇಡೀ ಪಶ್ಚಿಮ ಘಟ್ಟದಲ್ಲಿ ಭಾರೀ ವಿರೋಧ ಎದುರಿಸುತ್ತಿರುವ ನದಿ ತಿರುವು ಯೋಜನೆಗಳ ಕುರಿತು, ಲಿಂಗನಮಕ್ಕಿ ನೀರು ಬೆಂಗಳೂರಿಗೆ ಸಾಗಿಸುವ ಯೋಜನೆ, ಬೇಡ್ತಿ ವರದಾ, ಅಘನಾಶಿನಿ–ವರದಾ, ಅಘನಾಶಿನಿ– ಬೆಂಗಳೂರು, ಕಾಳಿ– ಘಟಪ್ರಭಾ ಮುಂತಾದ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ವೃಕ್ಷಲಕ್ಷ‌ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ.

ಶಿರಸಿಯಲ್ಲಿ ಸಭೆ:ಶನಿವಾರ ಇಲ್ಲಿ ಪರಿಸರ ಕಾರ್ಯಕರ್ತರ ಸಭೆ ನಡೆಯಿತು. ಸಭೆ ಜುಲೈ 10ರಂದು ಅಘನಾಶಿನಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಶಿರಸಿಯ ನಾಗರಿಕರಿಗೆ ಮನವಿ ಮಾಡಲಾಯಿತು. ಹೋರಾಟ ಸಮಿತಿ ಕಾರ್ಯದರ್ಶಿ ಮಹಾಬಲೇಶ್ವರ ಹೆಗಡೆ, ಸಿದ್ದಾಪುರ ತಾಲ್ಲೂಕಿನ ಜನಪ್ರತಿನಿಧಿಗಳು ಅಭಯಾರಣ್ಯಕ್ಕೆ ಅಘನಾಶಿನಿ ಕಣಿವೆ ಸೇರ್ಪಡೆ ವಿರೋಧಿಸಿ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಗೋಪಾಲಕೃಷ್ಣ ತಂಗಾರ್ಮನೆ, ಬೇಡ್ತಿ– ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ಪ್ರೊ. ಆರ್.ವಿ.ಭಾಗ್ವತ, ವಿ.ಪಿ.ಹೆಗಡೆ ವೈಶಾಲಿ, ವಿಜ್ಞಾನಿ ಪಿ.ಆರ್.ಭಟ್ಟ, ಮಧುಮತಿ ಹೆಗಡೆ, ಈಶಣ್ಣ ನೀರ್ನಳ್ಳಿ, ಎನ್.ಆರ್.ಹೆಗಡೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.