ADVERTISEMENT

ಯಲ್ಲಾಪುರ: ಭೀಮಣ್ಣ ನಾಯ್ಕ ಕ್ಷೇತ್ರಕ್ಕೆ ಕಾಲಿಡುತ್ತಲೇ ಚುರುಕಾದ ಶಿವರಾಮ ಹೆಬ್ಬಾರ್

ಚುರುಕಾಗಿರುವ ಕಾಂಗ್ರೆಸ್ ಹಾಗೂ ಹೆಬ್ಬಾರ್ ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 12:45 IST
Last Updated 1 ಡಿಸೆಂಬರ್ 2019, 12:45 IST
   

ಶಿರಸಿ: ಡಿಸೆಂಬರ್‌ನಲ್ಲಿ ನಡೆಯಲಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಘೋಷಣೆ ಮಾಡಿರುವ ಬೆನ್ನಲ್ಲೇ, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್ ಚುರುಕಾಗಿದ್ದಾರೆ.

ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ 15 ಜನರಲ್ಲಿ ಒಬ್ಬರಾಗಿರುವ ಅವರು, ಕೋರ್ಟ್ ತೀರ್ಪು ಬರುವ ತನಕ ಕಾಯುವುದಾಗಿ ಹೇಳಿಕೊಂಡಿದ್ದರು. ಅಲ್ಲದೇ, ಯಾವುದೇ ಪಕ್ಷದಲ್ಲೂ ಗುರುತಿಸಿಕೊಳ್ಳದೇ ತಟಸ್ಥರಾಗಿದ್ದರು. ‘ನಾನು ಬಿಜೆಪಿ ಸೇರಿಲ್ಲ, ಕೋರ್ಟ್ ತೀರ್ಪು ಬಂದ ಮೇಲೆ ಎಲ್ಲ 15 ಜನರು ಒಟ್ಟಾಗಿ ಸಾಮೂಹಿಕ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಕೂಡ ಹೇಳುತ್ತಿದ್ದರು. ಆದರೆ, ಕಳೆದ ಒಂದೆರಡು ದಿನಗಳಿಂದ ಕ್ಷೇತ್ರದಲ್ಲಿ ಬೆಂಬಲಿಗರ ಸಭೆ ನಡೆಸುತ್ತಿರುವ ಅವರು, ರಾಜ್ಯದ ಬಿಜೆಪಿ ಸರ್ಕಾರದ ಪರ ಮಾತನಾಡುತ್ತಿದ್ದಾರೆ.

ನ.4ರಂದು ಬನವಾಸಿ ಹೋಬಳಿಯ ಬದನಗೋಡ, ಬಿಸಲಕೊಪ್ಪ, ಅಂಡಗಿ, ಬಂಕನಾಳ, ಉಂಚಳ್ಳಿ, ಹಲಗದ್ದೆ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಬೆಂಬಲಿಗರ ಸಭೆ ಕರೆದಿರುವ ಹೆಬ್ಬಾರ್, ಉಪಚುನಾವಣೆಯ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಭೀಮಣ್ಣ ನಾಯ್ಕ, ಪಕ್ಷದ ಕಾರ್ಯಕರ್ತರೊಡಗೂಡಿ ಕ್ಷೇತ್ರದಲ್ಲಿ ಸಭೆ ನಡೆಸುತ್ತಿದ್ದಾರೆ. ಉಪಚುನಾವಣೆಯನ್ನು ಕಾಂಗ್ರೆಸ್ ಸವಾಲಾಗಿ ಸ್ವೀಕರಿಸಿದೆ. ಸೋಮವಾರ (ನ.4ರಂದು)ದಂದು ಮುಂಡಗೋಡ, ಯಲ್ಲಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.