ADVERTISEMENT

ಅನಧಿಕೃತ ಸಿಗಡಿ ಕೃಷಿ ತಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 12:40 IST
Last Updated 23 ಜನವರಿ 2025, 12:40 IST
ಕುಮಟಾ ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯಿತಿಯ ಹೊರಭಾಗದ ಖಾಸಗಿ ಜಮೀನಿನಲ್ಲಿ ಅನಧಿಕೃತವಾಗಿ ಕೃತಕ ಸಿಗಡಿ ಕೃಷಿ ನಡೆಸುತ್ತಿರುುದನ್ನು ವಿರೋಧಿಸಿ ಗ್ರಾಮಸ್ಥರು ಗುರುವಾರ ತಹಶೀಲ್ದಾರ್‌ಗೆ ದೂರು ಸಲ್ಲಿಸಿದರು
ಕುಮಟಾ ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯಿತಿಯ ಹೊರಭಾಗದ ಖಾಸಗಿ ಜಮೀನಿನಲ್ಲಿ ಅನಧಿಕೃತವಾಗಿ ಕೃತಕ ಸಿಗಡಿ ಕೃಷಿ ನಡೆಸುತ್ತಿರುುದನ್ನು ವಿರೋಧಿಸಿ ಗ್ರಾಮಸ್ಥರು ಗುರುವಾರ ತಹಶೀಲ್ದಾರ್‌ಗೆ ದೂರು ಸಲ್ಲಿಸಿದರು   

ಕುಮಟಾ: ಪರವಾನಗಿ ರದ್ದಾದರೂ ಖಾಸಗಿ ವ್ಯಕ್ತಿಯೊಬ್ಬರು ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯಿತಿಯ ಹೊರಭಾಗದ ಖಾಸಗಿ ಜಮೀನಿನಲ್ಲಿ ಅನಧಿಕೃತವಾಗಿ ಕೃತಕ ಸಿಗಡಿ ಕೃಷಿ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರು ಗುರುವಾರ ತಹಶೀಲ್ದಾರ್ ಅವರಿಗೆ ದೂರು ನೀಡಿದರು.

‘ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯ್ತಿಯ ಸರ್ವೆ ನಂಬರ್ 53/3 ಹಾಗೂ ಸುತ್ತಲಿನ ಸುಮಾರು ಎಂಟು ಸರ್ವೆ ನಂಬರ್‌ಗಳ 2 ಎಕರೆ ಜಾಗದಲ್ಲಿ ಸಂತೋಷ್ ಶಟ್ಟಿ ಎನ್ನುವ ಉದ್ಯಮಿ ವಿ.ಆರ್. ಆಕ್ವಾ ಫಾರ್ಮ್ ಹೆಸರಿನಲ್ಲಿ ಕೃತವಾಗಿ ಸಿಗಡಿ ಬೆಳೆಸುತ್ತಿದಾರೆ. ಸಿಗಡಿ ಕೃಷಿ ಅನುಮತಿ ನೀಡುವಾಗ ವಿಧಿಸಿದ್ದ ಷರತ್ತನ್ನು ಉಲ್ಲಂಘಿಸಿದ್ದರಿಂದ ಪರವಾನಗಿ ರದ್ದುಗೊಳಿಸಿ ಸಿಗಡಿ ಕೃಷಿ ಸ್ಥಗಿತಕ್ಕೆ ಗ್ರಾಮ ಪಂಚಾಯಿತಿ ಸೂಚಿಸಿತ್ತು. ಆದರೂ ಉದ್ಯಮಿ ಅನಧಿಕೃತವಾಗಿ ಸಿಗಡಿ ಕೃಷಿ ಮುಂದುವರಿಸಿದ್ದಾರೆ. ಕರಾವಳಿ ನಿಯಂತ್ರಣ ವಲಯದಿಂದ ಅನುಮತಿ ಪಡೆಯದೇ ಸುತ್ತಲೂ ಇರುವ ಮರಳು ದಿಬ್ಬ ಸಮತಟ್ಟುಗೊಳಿಸಿದ್ದರಿಂದ ಸಮುದ್ರ ನೀರು ಜನ ವಸತಿ ಹಾಗೂ ಕೃಷಿ ಭೂಮಿಗೆ ನುಗ್ಗುವ ಅಪಾಯವಿದೆ. ಸಿಗಡಿ ಹೊಂಡದಲ್ಲಿರುವ ನೀರನ್ನು ಶುದ್ಧೀಕರಿಸದೇ ಹಾಗೆಯೇ ಬಿಡುವುದರಿಂದ ಸುತ್ತಲೂ ದುರ್ವಾಸನೆ ಬೀರುತ್ತಿದೆ. ಇದು ರೋಗ ಹರಡಲು ಕಾರಣವಾಗುತ್ತಿದೆ. ಈ ನೀರು ಸುತ್ತಲಿನ ಕುಡಿಯುವ ನೀರಿನ ಬಾವಿ, ಬೋರ್‌ವೆಲ್‌ಗಳಿಗೂ ನುಗ್ಗುವ ಅಪಾಯವಿದೆ. ದುರ್ವಾಸನೆಯುಕ್ತ ನೀರಿನಿಂದ ಸುತ್ತಲಿನ ಪರಿಸರದಲ್ಲಿ ಸೊಳ್ಳೆ ಉತ್ಪಾದನೆ ಆರಂಭವಾಗಿದೆ. ಸುತ್ತಲೂ ಅಳವಡಿಸಿದ್ದ ಪೈಪ್ ಹಾಗೂ ಬಲೆಗಳಿಂದ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಸ್ಥಳೀಯರಿಗೆ ತೊಂದರೆ ಉಂಟಾಗುತ್ತದೆ. ಈ ಬಗ್ಗೆ ಸ್ಥಳೀಯರು ಆಕ್ಷೇಪಿಸಿದರೆ ಸಂಘರ್ಷದ ವಾತಾವರಣ ಉಂಟಾಗುತ್ತಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಹುಮನಾಬಾದ್ ತಾಲ್ಲೂಕಿನ ದೀಪಾ ತಾಳಂಪಳ್ಳಿ ಎನ್ನುವವರು ಸಹ ಸರ್ವೆ ನಂಬರ್ 63/1 ರ ಸುಮಾರು 18 ಗುಂಟೆ ಖಾಸಗಿ ಜಾಗದಲ್ಲಿ ಅನಧಿಕೃತವಾಗಿ ಕೃತಕ ಸಿಗಡಿ ಕೃಷಿ ಆರಂಭಿಸಿದ್ದಾರೆ. ಎರಡೂ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಗಿದೆ ಎಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಸ್.ಟಿ. ನಾಯ್ಕ, ಮಾಜಿ ಅಧ್ಯಕ್ಷೆ ರತ್ನಾ ಹರಿಕಂತ್ರ, ಮಾಜಿ ಸದಸ್ಯ ಸುರೇಶ ಹರಿಕಂತ್ರ, ಶ್ರೀಧರ ಹರಿಕಂತ್ರ, ಪುರಸು ಹರಿಕಂತ್ರ, ಈಶ್ವರ ಹರಿಕಂತ್ರ ಸೇರಿದಂತೆ 30ಕ್ಕೂ ಹೆಚ್ಚು ಮೀನುಗಾರರು ದೂರಿದ್ದಾರೆ. ತಹಶೀಲ್ದಾರ್ ಪರವಾಗಿ ಶಿರಸ್ತೇದಾರ ವಸಂತ ಸಾಮಂತ ಮನವಿ ಸ್ವೀಕರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.