ಶಿರಸಿ: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣದ ಅಂಗವಾಗಿ ಜಿಲ್ಲೆಯ ಎಲ್ಲ ಬ್ಲಾಕ್ ವ್ಯಾಪ್ತಿಯಲ್ಲಿ ನಡೆಯುವ ಪ್ರತಿಜ್ಞಾ ಕಾರ್ಯಕ್ರಮದ ಯಶಸ್ಸಿಗೆ 14 ಜನ ಉಸ್ತುವಾರಿಗಳನ್ನು ನೇಮಿಸಲಾಗಿದೆ. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಮುಖ ಮಂಜುನಾಥ ಭಂಡಾರಿ ಹೇಳಿದರು.
ಶುಕ್ರವಾರ ಇಲ್ಲಿನ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಉಸ್ತುವಾರಿಗಳ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷ ಪದಗ್ರಹಣ ಕಾರ್ಯಕ್ರಮ ಜುಲೈ 2ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅದೇ ಸಮಯದಲ್ಲಿ ಲಕ್ಷಾಂತರ ಕಾರ್ಯಕರ್ತರು ಪಕ್ಷ ಬಲಗೊಳಿಸುವ ಪ್ರತಿಜ್ಞೆ ಮಾಡಲಿದ್ದಾರೆ ಎಂದರು.
ಅಧಿಕಾರದ ದಾಹದಿಂದಕೆಲವರು ಪಕ್ಷಾಂತರ ಮಾಡಿದ ಕಹಿ ಅನುಭವವಾಗಿದೆ. ಇನ್ನು ಮುಂದೆ ಇಂತಹ ಸಂದರ್ಭಗಳು ಬರಬಾರದು. ಪಕ್ಷ ಬಲವರ್ಧನೆಗೊಳಿಸಬೇಕೆಂಬ ಭಾವನೆ ಪ್ರತಿ ಕಾರ್ಯಕರ್ತನಲ್ಲಿ ಮೂಡಬೇಕು. ಹೀಗಾಗಿ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಈ ಸಂಬಂಧ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯದ 12ಸಾವಿರ ಕಡೆಗಳಲ್ಲಿ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಸುಮಾರು 15 ಲಕ್ಷ ಕಾರ್ಯಕರ್ತರು ಇದರಲ್ಲಿ ಒಳಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳ ಮೂಲಕ 80 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸುತ್ತಾರೆ. ಪದಗ್ರಹಣದ ಮೂಲಕ ಇಷ್ಟು ಜನರನ್ನು ಕಾಂಗ್ರೆಸ್ ಪಕ್ಷ ತಲುಪುತ್ತದೆ ಎಂದು ಹೇಳಿದರು.
ಪ್ರತಿ ಹಳ್ಳಿ, ಬೂತ್ ಮಟ್ಟದಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಭದ್ರವಾಗಿದ್ದ ಕಾಂಗ್ರೆಸ್ನಲ್ಲಿ ಸಣ್ಣ ಬಿರುಕಾಗಿದೆ. ಇನ್ನೊಮ್ಮೆ ಜಿಲ್ಲೆಯಲ್ಲಿ ಪಕ್ಷ ಗಟ್ಟಿಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾರ್ಯಕ್ರಮದ ಉಸ್ತುವಾರಿಗಳಾದ ರಾಜನಂದಿನಿ ಕಾಗೋಡ, ವೆರೋನಿಕಾ ಕರೋಲಿನಾ, ಶ್ಯಾಮಲಾ ಭಂಡಾರಿ, ಸುನೀತಾ ಶೆಟ್ಟಿ, ಸುಷ್ಮಾ ರೆಡ್ಡಿ, ನವೀನಚಂದ್ರ ಶೆಟ್ಟಿ, ಜಿ.ಡಿ.ಘೋರ್ಪಡೆ, ಸುರೇಶ ಸವಣೂರ, ರಾಮಪ್ಪ ಉಳ್ಳಾಗಡ್ಡಿ, ನಿಜಾಮ್ ಫೌಜದಾರ್, ಶ್ರೀನಿವಾಸ ಹಾಲಳ್ಳಿ, ಶಿವಯೋಗಿ ಹಿರೇಮಠ, ಶೋಯೆಬ್ ಅಹಮ್ಮದ್, ಪ್ರಮುಖರಾದ ವಿ.ಎಸ್.ಆರಾಧ್ಯ ಉಪಸ್ಥಿತರಿದ್ದರು. ಇದೇ ವೇಳೆ ಚೀನಾ ಗಡಿಯಲ್ಲಿ ಇತ್ತೀಚೆಗೆ ಹುತಾತ್ಮರಾದ ದೇಶದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.