ಶಿರಸಿ: ಮೀನುಗಾರ ಮೊಗೇರ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬಾರದು ಹಾಗೂ ಈಗಾಗಲೇ ಸುಳ್ಳು ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಪಡೆದುಕೊಂಡ ಪ್ರಮಾಣಪತ್ರಗಳನ್ನು ರದ್ದುಪಡಿಸಬೇಕು ಎಂದು ಸಂತ ರವಿದಾಸ ಸಮಾಜ ಅಭಿವೃದ್ಧಿ ಸಮಿತಿಯವರು ಮಂಗಳವಾರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್–2 ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
‘ಮೊಲದ ಬೇಟೆ ಆಡುವ ವೃತ್ತಿ ನಂಬಿ ಜೀವನ ಸಾಗಿಸುವ ದಕ್ಷಿಣ ಕನ್ನಡ ಜಿಲ್ಲೆ, ಕೊಳ್ಳೆಗಾಲ ಭಾಗದಲ್ಲಿ ವಾಸಿಸುವ ಮೊಗವೀರ ಸಮುದಾಯದವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿ, ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಈ ಸೌಲಭ್ಯವನ್ನು ಉತ್ತರ ಕನ್ನಡದಲ್ಲಿ ವಾಸಿಸುವ ಮೀನುಗಾರ ಸಮುದಾಯಕ್ಕೆ ಸೇರಿದ ಮೊಗೇರರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕುಲಶಾಸ್ತ್ರೀಯ ಅಧ್ಯಯನವನ್ನು ನಡೆಸಿ, ಸತ್ಯಾಂಶ ತಿಳಿದರಿತ ಬಳಿಕ ಮೊಗೇರ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ತಡೆ ಹಿಡಿಯಲಾಗಿದೆ. ಈಗ ಅದೇ ಸಮುದಾಯದವರು ತಮ್ಮನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಿ, ಸೌಲಭ್ಯ ಒದಗಿಸುವಂತೆ ಪ್ರತಿಭಟಿಸುತ್ತಿದ್ದಾರೆ. ಹೋರಾಟಕ್ಕೆ ಮಣಿದು ಸೌಲಭ್ಯ ನೀಡಬಾರದು. ನೈಜ ಪರಿಶಿಷ್ಟರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಮುಖರಾದ ಅರವಿಂದ್ರ ನೇತ್ರೆಕರ, ವಿನಾಯಕ ನಾಯ್ಕ, ಸುಭಾಷ ಕಾನಡೆ, ಪ್ರಭಾಕರ ಜೋಗಳೆಕರ, ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.