ADVERTISEMENT

ರಾಯರ ಆರಾಧನೆಗೆ ಸಹಸ್ರಾರು ಭಕ್ತರು

ಮೂರು ದಿನಗಳ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 13:03 IST
Last Updated 17 ಆಗಸ್ಟ್ 2019, 13:03 IST
ಶಿರಸಿಯ ರಾಘವೇಂದ್ರ ಮಠದಲ್ಲಿ ಶನಿವಾರ ಮಧ್ಯಾರಾಧನೆ ನಡೆಯಿತು
ಶಿರಸಿಯ ರಾಘವೇಂದ್ರ ಮಠದಲ್ಲಿ ಶನಿವಾರ ಮಧ್ಯಾರಾಧನೆ ನಡೆಯಿತು   

ಶಿರಸಿ: ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ರಾಮತಾರಕ ಜಪಯಜ್ಞಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಆರಾಧನೆಯ ಭಾಗವಾಗಿ ರಾಘವೇಂದ್ರ ಸೇವಾ ಸಮಿತಿಯು ರಾಘವೇಂದ್ರ ಮಠದಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾರ್ಯಕ್ರಮದಲ್ಲಿ ಶುಕ್ರವಾರ ಲಕ್ಷ್ಮಿ ನರಸಿಂಹ ಹವನ, ಶನಿವಾರ ರಾಮತಾರಕ ಜಪಯಜ್ಞ ನಡೆಯಿತು. ಬೆಳಿಗ್ಗೆ ಅಷ್ಟೋತ್ತರ, ಪವಮಾನಸೂಕ್ತ ಪಠಣ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮತ್ತು ತುಳಸಿ ಅರ್ಚನೆ ಸೇವೆಗಳು ನೆರವೇರಿದವು.

ಮಧ್ಯಾರಾಧನೆ ನಿಮಿತ್ತ ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ 5000ಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದರು. ಸುರಿವ ಮಳೆಯನ್ನೂ ಲೆಕ್ಕಿಸದೇ ಭಕ್ತರ ದಂಡು ರಾಘವೇಂದ್ರ ಮಠಕ್ಕೆ ಬಂದಿತ್ತು. ಸಂಜೆ ದೈವಜ್ಞ ಮಹಿಳಾ ಮಂಡಳಿ ಭಜನೆ ಕಾರ್ಯಕ್ರಮ, ನಂತರ ಉಪನ್ಯಾಸ ಕಾರ್ಯಕ್ರಮ ಜರುಗಿತು. ಸೇವಾ ಸಮಿತಿ ಪ್ರಮುಖರಾದ ಡಿ.ಡಿ.ಮಾಡಗೇರಿ, ಶ್ರೀನಿವಾಸ ಹೆಬ್ಬಾರ್, ಕೆ.ವಿ.ಭಟ್, ಐ.ಎಂ.ಹೆಗಡೆ ಇದ್ದರು.

ADVERTISEMENT

ಮಠದಲ್ಲಿ ಇಂದು:

ಮಠದಲ್ಲಿ ಭಾನುವಾರ ಪವಮಾನ ಹವನ, ಸಂಜೆ ಗುರುಸಿದ್ದೇಶ್ವರ ಮಹಿಳಾ ಮಂಡಳಿ ಸದಸ್ಯೆಯರಿಂದ ಭಜನೆ, ಜೈಸಂತೋಷಿಮಾ ಬಾಲಮಂದಿರದ ಮಕ್ಕಳಿಂದ ನೃತ್ಯರೂಪಕ, ಸಂಜೆ ಇಟಗಿಯ ಇಂದರೇಶಾಚಾರ ಅವರಿಂದ ಉಪನ್ಯಾಸ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.