ಕಾರವಾರ:ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ಬೀಳುತ್ತಿರುವ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ಮುಂಗಾರು ಮಳೆ ವಿಳಂಬವಾದ ಕಾರಣಗ್ರಾಮೀಣ ಭಾಗದಲ್ಲಿ ಕೃಷಿಕರು ಈಗ ಗದ್ದೆಗಳ ಉಳುಮೆ ಮಾಡುತ್ತಿದ್ದಾರೆ.
ದೇವಳಮಕ್ಕಿ, ಸಿದ್ದರ, ನಗೆ, ಕೋವೆ, ಕೆರವಡಿ ಮುಂತಾದ ಭಾಗಗಳಲ್ಲಿ ಬಹುತೇಕ ರೈತರು ಇಂದಿಗೂ ಸಾಂಪ್ರದಾಯಿಕ ಕೃಷಿಯನ್ನೇ ಅನುಸರಿಸುತ್ತಿದ್ದಾರೆ. ಜೋಡೆತ್ತುಗಳನ್ನು ನೊಗಕ್ಕೆ ಕಟ್ಟಿ ಮಣ್ಣನ್ನು ಹದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಳೆ ಇದೇ ರೀತಿ ಇನ್ನು ಸ್ವಲ್ಪ ದಿನ ಮುಂದುವರಿದರೆ ಅನುಕೂಲ ಎನ್ನುವುದು ರೈತ ಮಹಾರುದ್ರ ಅವರ ಅಭಿಪ್ರಾಯವಾಗಿದೆ.
‘ಈ ಬಾರಿಬರಗಾಲ ಬಂದ ಕಾರಣ ಬಾವಿಯೂ ಸೇರಿದಂತೆ ಎಲ್ಲ ಜಲಮೂಲಗಳು ಬತ್ತಿದ್ದವು. ಬೇಸಿಗೆಯಲ್ಲಿ ನೀರಿಗೆ ಭಾರಿ ಸಮಸ್ಯೆಯಾಯಿತು. ಈಗ ಮಳೆ ಬಂದ ಕಾರಣ ಕೆಲಸ ಮಾಡಲೂ ಉಲ್ಲಾಸವಾಗುತ್ತಿದೆ. ವಿಳಂಬವಾರೂ ಸರಿ, ಚೆನ್ನಾಗಿ ಮಳೆಯಾಗಿ ನೀರಿನ ಸಮಸ್ಯೆ ನೀಗಲಿ’ ಎಂದು ಆಶಿಸಿದರು.
ಹಳ್ಳಗಳು ಭರ್ತಿ:ಮಲ್ಲಾಪುರ, ಕೆರವಡಿ, ಅಣಶಿ ಸುತ್ತಮುತ್ತ ಒಂದೇ ಸಮನೆ ಮಳೆಯಾಗುತ್ತಿರುವ ಕಾರಣ ಎಲ್ಲ ಹಳ್ಳಕೊಳ್ಳಗಳೂ ಮೈದುಂಬಿ ಹರಿಯುತ್ತಿವೆ. ವಿವಿಧೆಡೆ ಗ್ರಾಮೀಣ ರಸ್ತೆಗಳಲ್ಲೇ ನೀರು ಹರಿಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.