ADVERTISEMENT

ಕಾರ್ಮಿಕರಿಗೆ ಮೀಸಲಾತಿ ಜಾರಿಯಾಗಲಿ: ಜಾರ್ಜ್ ಫರ್ನಾಂಡಿಸ್

ಕಾರ್ಮಿಕ ದಿನಾಚರಣೆ: ವಿವಿಧ ರಂಗಗಳ ಶ್ರಮಜೀವಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 1 ಮೇ 2019, 10:39 IST
Last Updated 1 ಮೇ 2019, 10:39 IST
ಕಾರವಾರದಲ್ಲಿ ಬುಧವಾರ ಆಯೋಜಿಸಲಾದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಜಾರ್ಜ್ ಫರ್ನಾಂಡಿಸ್ ಮಾತನಾಡಿದರು.
ಕಾರವಾರದಲ್ಲಿ ಬುಧವಾರ ಆಯೋಜಿಸಲಾದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಜಾರ್ಜ್ ಫರ್ನಾಂಡಿಸ್ ಮಾತನಾಡಿದರು.   

ಕಾರವಾರ:‘ಅಸಂಘಟಿತ ಕಾರ್ಮಿಕರು ಸಂಘಟನೆಯಾದಾಗ ಅವರಿಗೆ ಬಲ ಬರುತ್ತದೆ. ಶ್ರಮಜೀವಿಗಳನ್ನು ಉದ್ಧಾರ ಮಾಡಲು ಸರ್ಕಾರಗಳು ಅವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು’ ಎಂದು ಸೇಂಟ್ ಮಿಲಾಗ್ರಿಸ್ಸೌಹಾರ್ದ ಸಹಕಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಫರ್ನಾಂಡಿಸ್ ಅಭಿಪ್ರಾಯ ಪಟ್ಟರು.

ನಗರದಲ್ಲಿ ಭಾರತೀಯ ಮಜ್ದೂರ್ಕಾಂಗ್ರೆಸ್‌ನ ಜಿಲ್ಲಾ ಘಟಕಬುಧವಾರ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ನಮ್ಮ ಜಿಲ್ಲೆಯೊಂದರಲ್ಲೇ ಸಾವಿರಾರು ಮಂದಿ ಅಸಂಘಟಿತ ಕಾರ್ಮಿಕರಿದ್ದಾರೆ. ಅವರಿಗೆ ಕಾರ್ಮಿಕ ಸಂಘಟನೆಗಳ ಬಗ್ಗೆ ಅರಿವುಮೂಡಿಸಬೇಕು. ಪ್ರಾಮಾಣಿಕವಾಗಿ ಬೆವರು ಸುರಿಸಿ ಕೆಲಸ ಮಾಡಿದವರಿಗೆ ಸಂಬಳ ನೀಡಲು ಸತಾಯಿಸುವವರನ್ನುಗಟ್ಟಿ ಧ್ವನಿಯಿಂದ ಪ್ರಶ್ನಿಸಲು ಇದರಿಂದ ಸಾಧ್ಯವಾಗುತ್ತದೆ’ ಎಂದರು.

ADVERTISEMENT

‘ಎಲ್ಲರಿಗೂ ಆಕಾಶಕ್ಕೆ ಏಣಿ ಹಾಕುವಂತಹ ಮಹತ್ತರವಾದ ಬಯಕೆ ಇರಬೇಕು. ಆಗ ಮಾತ್ರ ಮುಂದೆ ಬರಲು ಸಾಧ್ಯ. ತಾನು ಮಾಡುತ್ತಿರುವ ಕೆಲಸಕ್ಕಿಂತಲೂ ಮೇಲಿನ ಹಂತಕ್ಕೆ ತಲುಪಲು ಶ್ರಮಿಸಬೇಕು. ಇದಕ್ಕೆ ಪ್ರಾಮಾಣಿಕತೆ, ಅಧ್ಯಯನ, ಯೋಜನೆ ಮತ್ತು ತಾನೇ ಖುದ್ದು ಕೆಲಸ ಮಾಡುವ ಹುಮ್ಮಸ್ಸಿರಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ರಾಮನಾಯ್ಕ ಮಾತನಾಡಿ, ‘ಸಂಘಟನೆಗಳು ಅಸಂಘಟಿತ ಹಾಗೂ ಧ್ವನಿಯಿಲ್ಲದ ಕಾರ್ಮಿಕರಿಗೆ ಆಸರೆಯಾಗಬೇಕು. ಮನುಷ್ಯನಿಗೆ ಅನುಭವಕ್ಕಿಂತ ದೊಡ್ಡ ವಿದ್ಯೆಯಿಲ್ಲ. ಇದಕ್ಕೆ ಕಾರ್ಯಕ್ರಮ ಉದ್ಘಾಟಿಸಿದ ಉಮಾಬಾಯಿ ಅವರೇ ಸಾಕ್ಷಿ. 18 ವರ್ಷಗಳಿಂದ ಸಿಮೆಂಟ್, ಕಾಂಕ್ರೀಟ್ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಈ ರೀತಿಯ ಅನೇಕ ಕಾರ್ಮಿಕರು ವಿವಿಧ ರಂಗಗಳಲ್ಲಿದ್ದಾರೆ. ಅವರೆಲ್ಲರ ಸಂಘಟನೆಯಾಗಲಿ’ ಎಂದು ಆಶಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಕಟ್ಟಡ ಕಾರ್ಮಿಕರಾದ ಉಮಾಬಾಯಿ ಗುನಗಿಹಾಗೂ ವಿವಿಧ ವಿಭಾಗಗಳ ಕಾರ್ಮಿಕರನ್ನು ಸನ್ಮಾನಿಸಲಯಿತು.

ಪ್ರಮುಖರಾದ ಅರವಿಂದ ತೆಂಡೂಲ್ಕರ್, ವಿಷ್ಣು ಹರಿಕಾಂತ, ಮಕ್ಬೂಲ್ ಶೇಖ್ ಇದ್ದರು.ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಸಂತೋಷ ಗುರುಮಠ ಸ್ವಾಗತಿಸಿದರು. ಸುದರ್ಶನ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.