ಕಾರವಾರ: ‘ಎರಡು ವರ್ಷಗಳಿಂದ ವಾರ್ಡ್ ಸದಸ್ಯೆ ಸ್ಥಳೀಯ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ನಮ್ಮ ಪ್ರದೇಶದ ಸಮಸ್ಯೆಗಳು ಬಗೆಹರಿಯದೇ ಸಮಸ್ಯೆಗೀಡಾಗಿದ್ದೇವೆ’ ಎಂದು ನಗರ ಸಭೆಯ ಏಳನೇ ವಾರ್ಡ್ ನಿವಾಸಿಗಳು ಆರೋಪಿಸಿದ್ದಾರೆ. ಈ ಬಗ್ಗೆ ನಗರಸಭೆ ಅಧ್ಯಕ್ಷೆ ಡಾ.ನಿತಿನ್ ಪಿಕಳೆ ಅವರಿಗೆ ಮಂಗಳವಾರ ಮನವಿ ಮಾಡಿದ್ದಾರೆ.
‘ವಾರ್ಡ್ ಸದಸ್ಯೆ ಶಿಲ್ಪಾ ಸುಭಾಷ್ ನಾಯ್ಕ ಅವರು ಈಚೆಗೆ ಧಾರಾಕಾರ ಮಳೆ ಸುರಿದು ಮನೆಗಳಿಗೆ ನೀರು ನುಗ್ಗಿದಾಗಲೂ ಸ್ಪಂದಿಸಲಿಲ್ಲ. ಅನೇಕ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಅವರು ತಮ್ಮ ದೂರವಾಣಿ ಸಂಖ್ಯೆಯನ್ನೂ ಬದಲಾಯಿಸಿದ್ದಾರೆ. ಒಂದುವೇಳೆ ಕರೆ ಮಾಡಿದರೂ ಪ್ರತಿಕ್ರಿಯಿಸುತ್ತಿಲ್ಲ. ಇದರಿಂದ ವಾರ್ಡ್ ಅನಾಥವಾಗಿದೆ’ ಎಂದು ದೂರಿದ್ದಾರೆ.
‘ವಾರ್ಡ್ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಯಾರೂ ಇಲ್ಲದ ಕಾರಣ, ಪ್ರತಿಯೊಂದಕ್ಕೂ ನಗರಸಭೆ ಕಚೇರಿಗೇ ಬರಬೇಕಾಗಿದೆ. ಈ ಹಿಂದೆ ನೀವು ಸೂಚನೆ ನೀಡಿದಂತೆ ಸಮಸ್ಯೆಗಳ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೆ ತರಲು ಪ್ರಯತ್ನಿಸಿದ್ದೇವೆ. ಆದರೆ, ಅವರು ವಾರ್ಡ್ನತ್ತ ಮುಖ ಮಾಡದ ಕಾರಣ ನಾವು ಯಾರನ್ನು ಭೇಟಿ ಮಾಡಬೇಕು’ ಎಂದು ಸ್ಥಳೀಯರು ನಗರಸಭೆ ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.