ADVERTISEMENT

ಪರ್ಯಾಯ ಬೆಳೆಯಾಗಿ ರಬ್ಬರ್ ಕೃಷಿ, ಅಡಿಕೆಯ ಜೊತೆಗೆ ಮರಗಳ ಆರೈಕೆ

ಜಿಲ್ಲೆಯಲ್ಲಿ ಬೆರಳೆಣಿಕೆಯ ಬೆಳೆಗಾರರು

ಎಂ.ಜಿ.ಹೆಗಡೆ
Published 20 ಮೇ 2019, 19:30 IST
Last Updated 20 ಮೇ 2019, 19:30 IST
ಟ್ಯಾಪಿಂಗ್ ಮಾಡಿದ ರಬ್ಬರ್ ಮರದ ಜೊತೆಗೆ ರಾಮಚಂದ್ರ ಹೆಗಡೆ ಗುಡ್ಗೆ
ಟ್ಯಾಪಿಂಗ್ ಮಾಡಿದ ರಬ್ಬರ್ ಮರದ ಜೊತೆಗೆ ರಾಮಚಂದ್ರ ಹೆಗಡೆ ಗುಡ್ಗೆ   

ಹೊನ್ನಾವರ:ತಾಲ್ಲೂಕಿನ ಸರಳಗಿ ಗ್ರಾಮದ ದೇವರಗದ್ದೆ ಮಜರೆಯಲ್ಲಿ ಹೆದ್ದಾರಿ ಪಕ್ಕದಲ್ಲೇ ಹಸಿರಿನಿಂದ ಕಂಗೊಳಿಸುವ ರಬ್ಬರ್ ತೋಟವೊಂದಿದೆ. ರಾಮಚಂದ್ರ ಹೆಗಡೆ ಗುಡ್ಗೆ ಈ ತೋಟದ ಮಾಲೀಕರು. ಮುಗ್ವಾ ಗ್ರಾಮದಿಂದ ಕೆಲವು ವರ್ಷಗಳ ಹಿಂದೆ ಇಲ್ಲಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.ಹೊಸತನದ ಅನ್ವೇಷಣೆಯಲ್ಲಿ ರಬ್ಬರ್ ಬೆಳೆಯನ್ನು ಆಯ್ದುಕೊಂಡರು.

ಇವರು ಅಡಿಕೆಯನ್ನು ಪ್ರಧಾನ ಬೆಳೆಯಾಗಿ ಬೆಳೆಯುತ್ತಾರೆ. ತಾಲ್ಲೂಕಿನ ಬೆರಳೆಣಿಕೆಯ ರಬ್ಬರ್ ಬೆಳೆಗಾರರಲ್ಲಿ ಒಬ್ಬರಾಗಿದ್ದಾರೆ.
ಕುಂದಾಪುರದಿಂದ ರಬ್ಬರ್ ಸ್ಟಂಪ್‌ಗಳನ್ನು ತಂದು ನಾಟಿ ಮಾಡಿದರು. ನಂತರ ಗುಡ್ಗೆ ರಬ್ಬರ್ ತೋಟವನ್ನು ಇಂದಿನ ಸ್ಥಿತಿಗೆ ತರಲು ಸಾಕಷ್ಟು ಹಣ, ಶ್ರಮ ವ್ಯಯಿಸಿದ್ದಾರೆ. ಇವರ ಪರಿಶ್ರಮದ ಪರಿಣಾಮವಾಗಿ ಎರಡು ಎಕರೆಜಾಗದಲ್ಲಿ ಸುಮಾರು 300 ರಬ್ಬರ್ ಗಿಡಗಳು ನಳನಳಿಸುತ್ತಿವೆ.

ಐದುವರ್ಷಗಳವರೆಗೆ ಗಿಡವನ್ನು ಪೋಷಿಸಿದ ನಂತರ ಅವುಟ್ಯಾಪಿಂಗ್‌ಗೆ (ಫಸಲು ಪಡೆಯುವುದು)ಸಿದ್ಧವಾಗುತ್ತದೆ. ಎರಡು ದಿನಗಳಿಗೊಮ್ಮೆ ಗಿಡದಿಂದ ರಬ್ಬರ್ ದ್ರವವನ್ನು ಸಂಗ್ರಹಿಸಬಹುದು. ನೀರನ್ನು ಅಷ್ಟಾಗಿ ಆಶ್ರಯಿಸದ ಈ ಮರಗಳು ಸುಮಾರು 25 ವರ್ಷ ಬದುಕುತ್ತದೆ. ಮರ ಒಣಗಿದ ನಂತರವೂ ಅದಕ್ಕೆ ಬೇಡಿಕೆ ಇದ್ದು, ಪ್ಲೈವುಡ್ ತಯಾರಿಕೆಗೆ ಬಳಕೆಯಾಗುತ್ತದೆ.

ADVERTISEMENT

‘ರಬ್ಬರ್, ಮೆಣಸಿನ ಕಾಳು ಕೃಷಿಯನ್ನು ಅಡಿಕೆಗೆ ಪೂರಕವಾಗಿ ಕೈಗೊಂಡಿದ್ದೇನೆ.ಮಾರುಕಟ್ಟೆ ಏರಿಳಿತದ ಪರಿಣಾಮ ಅನುಭವಿಸುತ್ತಿದ್ದೇನೆ’ ಎನ್ನುತ್ತಾರೆ ರಾಮಚಂದ್ರ ಗುಡ್ಗೆ.

‘ಎರಡು ವರ್ಷಗಳ ಹಿಂದೆ ರಬ್ಬರ್ ಬೆಳೆಯಿಂದಒಂದುಎಕರೆಗೆ ₹ 2 ಲಕ್ಷ ಆದಾಯ ಬರುತ್ತಿತ್ತು. ಆದರೆ, ಈ ವರ್ಷ ರಬ್ಬರ್ ಬೆಲೆ ಕೆ.ಜಿಗೆ ₹ 100ರ ಆಸುಪಾಸಿನಲ್ಲಿದೆ. ಎರಡುವರ್ಷಗಳ ಹಿಂದಿದ್ದ ಬೆಲೆಯ ಅರ್ಧಕ್ಕೆ ಕುಸಿದಿದೆ. ಆದ್ದರಿಂದ ಸದ್ಯ ಟ್ಯಾಪಿಂಗ್ ಮಾಡುವುದನ್ನು ನಿಲ್ಲಿಸಿದ್ದೇನೆ. ಟ್ಯಾಪಿಂಗ್‌ಗೆಕೂಲಿಕಾರರನ್ನು ಅವಲಂಬಿಸಿದರೆ ಬೆಳೆಗೆ ಈಗಿರುವ ಬೆಲೆಯಿಂದ ನಿರ್ವಹಣೆ ಸಾಧ್ಯವಾಗುವುದಿಲ್ಲ. ದರ ಬಂದಾಗ ಮತ್ತೆ ಟ್ಯಾಪಿಂಗ್ ಮಾಡುತ್ತೇನೆ’ ಎಂದು ಅವರು ಹೇಳುತ್ತಾರೆ.

ಸಾಗರದಲ್ಲಿ ಮಾರುಕಟ್ಟೆ

‘ತಾಲ್ಲೂಕಿನಲ್ಲಿ ಬೆಳೆದ ರಬ್ಬರ್ ಅನ್ನು ಸಾಗರದಲ್ಲಿರುವ ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತದೆ. ಹೆಚ್ಚು ಜನರು ರಬ್ಬರ್ ಬೆಳೆದರೆಸ್ಥಳೀಯವಾಗಿಯೂ ಮಾರುಕಟ್ಟೆ ಕಲ್ಪಿಸಬಹುದಾಗಿದೆ. ದೊಡ್ಡದಾಗಿ ಬೆಳೆಯುವ ರಬ್ಬರ್ ಗಿಡಗಳ ತರಗೆಲೆಗಳನ್ನು ಅಡಿಕೆ, ತೆಂಗಿನ ಮರಗಳಿಗೆ ಗೊಬ್ಬರವಾಗಿಯೂ ಉಪಯೋಗಿಸಬಹುದು. ಮರ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ತಂಪು ನೀಡುತ್ತದೆ. ಮಾರುಕಟ್ಟೆ ಸ್ಥಿರವಾದರೆ ರಬ್ಬರ್ ಬೆಳೆ ಲಾಭದಾಯಕವಾಗಿದೆ.ಯುವಕರು ಈ ಬೆಳೆಯ ಕಡೆ ಲಕ್ಷ್ಯ ವಹಿಸಬಹುದು’ ಎಂದು ರಾಮಚಂದ್ರ ಗುಡ್ಗೆ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.