ಕಾರವಾರ: ಸೀಬರ್ಡ್ ನೌಕಾನೆಲೆಯ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ 24 ಮಂದಿಗೆ ನಾಲ್ಕು ತಿಂಗಳಿನಿಂದ ವೇತನ ನೀಡಿಲ್ಲ. ಇದರ ವಿರುದ್ಧ ಇದೀಗ ಸಿಬ್ಬಂದಿ ಪೊಲೀಸ್ ದೂರು ದಾಖಲಿಸಲು ಸಜ್ಜಾಗಿದ್ದಾರೆ.
ಸೀಬರ್ಡ್ ಯೋಜನೆಗಾಗಿ ಜಾಗ ಕಳೆದುಕೊಂಡ ನಿರಾಶ್ರಿತರಿಗೆ ಐಎನ್ಎಸ್ ಪತಂಜಲಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಒದಗಿಸಲಾಗಿದೆ. ಆದರೆ, ಇದೀಗ ನಾಲ್ಕು ತಿಂಗಳಿನಿಂದ ಯುವಕರಿಗೆ ವೇತನ ನೀಡಿಲ್ಲ.
'ಗುತ್ತಿಗೆ ಪಡೆದುಕೊಂಡಿರುವ ಕೇರಳ ಮೂಲದ ಆರ್ಮರ್ ಅಡ್ಮಿನ್ ಕಂಪನಿಯನ್ನು ಈ ಬಗ್ಗೆ ಪ್ರಶ್ನಿಸಿದರೆ, ಪತಂಜಲಿಯಿಂದ ಕಂಪೆನಿಗೇ ಹಣ ಪಾವತಿಯಾಗಿಲ್ಲ. ಈ ಬಗ್ಗೆ ಐಎನ್ಎಸ್ ಪತಂಜಲಿ ಆಸ್ಪತ್ರೆ ಆಡಳಿತಕ್ಕೂ ಪತ್ರ ಬರೆದು ತಿಳಿಸಿದ್ದೇವೆ. ಅಲ್ಲಿಂದ ಹಣ ಬಂದ ಬಳಿಕ ಪಾವತಿ ಮಾಡುತ್ತೇವೆ ಎನ್ನುತ್ತಿದ್ದಾರೆ' ಎಂದು ದೂರಿದರು.
ಬಡ ಕುಟುಂಬದವರಾಗಿರುವ ಯುವಕರಿಗೆ ಇದೀಗ ಜೀವನ ಸಾಗಿಸಲೂ ಕಷ್ಟವಾಗಿದೆ. ಈ ಬಗ್ಗೆ ಡಿವೈಎಸ್ ಪಿ ಶಂಕರ್ ಮಾರಿಹಾಳ ಅವರಿಗೆ ದೂರು ನೀಡಲಾಗಿದ್ದು, ಅವರು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ್ದು, ಸಂಜೆಯ ಒಳಗೆ ವೇತನ ಪಾವತಿ ಮಾಡುವಂತೆ ತಿಳಿಸಿದ್ದಾರೆ. ಇಲ್ಲದಿದ್ದಲ್ಲಿ ಸಂಜೆ ಕಂಪೆನಿಯ ವಿರುದ್ಧ ದೂರು ದಾಖಲು ಮಾಡುವುದಾಗಿಯೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.