ADVERTISEMENT

ಅಂಕೋಲ | ಮತ್ತೆ ಎದುರಾಯ್ತು ಕಡಲ್ಕೊರೆತದ ಆತಂಕ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 3:36 IST
Last Updated 4 ಜೂನ್ 2020, 3:36 IST
ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ಸಮುದ್ರದ ಬೃಹತ್ ಅಲೆಗಳು ಅಪ್ಪಳಿಸಿದ ಪರಿಣಾಮ ದಡದಿಂದ ಮರಳು ಕೊಚ್ಚಿಕೊಂಡು ಹೋಗಿರುವುದು
ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ಸಮುದ್ರದ ಬೃಹತ್ ಅಲೆಗಳು ಅಪ್ಪಳಿಸಿದ ಪರಿಣಾಮ ದಡದಿಂದ ಮರಳು ಕೊಚ್ಚಿಕೊಂಡು ಹೋಗಿರುವುದು   

ಕಾರವಾರ:ಅರಬ್ಬಿ ಸಮುದ್ರದಲ್ಲಿ ಎರಡು ದಿನಗಳಿಂದ ಅಬ್ಬರಿಸುತ್ತಿರುವ ‘ನಿಸರ್ಗ’ ಚಂಡಮಾರುತದ ಪರಿಣಾಮ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಇದರಿಂದ ಕಡಲತೀರದ ನಿವಾಸಿಗಳಿಗೆ ಆತಂಕ ಮೂಡಿದೆ.

ಕಾರವಾರದ ಮಾಜಾಳಿ, ದೇವಬಾಗ, ಅಂಕೋಲಾ ತಾಲ್ಲೂಕಿನ ಹಾರವಾಡ, ಕೇಣಿ, ಭಟ್ಕಳ ತಾಲ್ಲೂಕಿನ ಹೆಬಳೆ, ಗೊರಟೆ, ಹೊನ್ನಾವರ ತಾಲ್ಲೂಕಿನ ಹೆಗಡೆಹಿತ್ಲು, ತೊಪ್ಪಲಕೇರಿ, ಕರ್ಕಿಕೋಡಿ, ಪಾವಿನಕುರ್ವಾ ಭಾಗದಲ್ಲಿ ಕೆಲವು ವರ್ಷಗಳಿಂದ ಕಲಡ್ಕೊರೆತ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಮುಂಗಾರು ಆರಂಭಕ್ಕೂ ಮೊದಲೇ ಚಂಡಮಾರುತದ ಕಾರಣದಿಂದಅಲೆಗಳು ದೈತ್ಯಾಕಾರ ತಾಳಿ ಈ ಭಾಗದ ಕಡಲತೀರವನ್ನು ಆವರಿಸಿಕೊಳ್ಳುತ್ತಿವೆ. ಮಳೆಗಾಲ ಶುರುವಾದರೆಕಡಲ್ಕೊರೆತದ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಬಹುದು ಎಂಬ ಆತಂಕ ಇಲ್ಲಿನ ನಿವಾಸಿಗಳಾದ್ದಾಗಿದೆ.

ADVERTISEMENT

ಜಿಲ್ಲೆಯ ಕರಾವಳಿಯಲ್ಲಿ ಎರಡು ದಿನಗಳಿಂದ ಅಬ್ಬರಿಸಿದ್ದ ಗಾಳಿ ಮಳೆ, ಬುಧವಾರ ಮಧ್ಯಾಹ್ನದ ನಂತರ ಶಾಂತವಾಯಿತು. ವಿವಿಧ ತಾಲ್ಲೂಕುಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ.

ಮಳೆ ಪ್ರಮಾಣ (ತಾಲ್ಲೂಕುವಾರು):ಕಾರವಾರದಲ್ಲಿ ಬುಧವಾರ ಬೆಳಿಗ್ಗೆ 8ರವರೆಗೆ ಅತಿ ಹೆಚ್ಚು 15.4 ಸೆಂಟಿಮೀಟರ್ ಮಳೆಯಾಗಿದೆ. ಉಳಿದಂತೆ ಹೊನ್ನಾವರದಲ್ಲಿ 8.3, ಕುಮಟಾದಲ್ಲಿ 5.4, ಅಂಕೋಲಾದಲ್ಲಿ 5.3, ಯಲ್ಲಾಪುರದಲ್ಲಿ 2.7, ಜೊಯಿಡಾದಲ್ಲಿ 2.6, ಶಿರಸಿಯಲ್ಲಿ 2.4, ಭಟ್ಕಳದಲ್ಲಿ 2, ಹಳಿಯಾಳದಲ್ಲಿ 1.9 ಸೆಂಟಿಮೀಟರ್‌ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.