ADVERTISEMENT

‘ಅಧ್ಯಾತ್ಮದಿಂದ ಜನಪರ ಸಮಾಜ ನಿರ್ಮಾಣ’

ಸಂತ ಸೇವಾಲಾಲ್ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 12:51 IST
Last Updated 18 ಫೆಬ್ರುವರಿ 2020, 12:51 IST
ಶಿರಸಿಯಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿಯಲ್ಲಿ ಬಂಜಾರ ಸಮುದಾಯದ ಮಾಹಿತಿ ಒಳಗೊಂಡ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು
ಶಿರಸಿಯಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿಯಲ್ಲಿ ಬಂಜಾರ ಸಮುದಾಯದ ಮಾಹಿತಿ ಒಳಗೊಂಡ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು   

ಶಿರಸಿ: ಸಾಂಪ್ರದಾಯಿಕ ಉಡುಗೆತೊಟ್ಟ ಬಂಜಾರ ಸಮುದಾಯದ ಬಾಲಕಿಯರ ಹುಸಿ ನಾಚಿಕೆಯ ಹೆಜ್ಜೆ, ಪೇಟ ಧರಿಸಿದ ಹಿರಿಯರ ಗಾಯನ, ಆಕರ್ಷಕ ಮೆರವಣಿಗೆಯೊಂದಿಗೆ ಮಂಗಳವಾರ ಇಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ನಗರಸಭೆ, ಸೇವಾಲಾಲ್ ಬಂಜಾರ ಸಂಘದ ತಾಲ್ಲೂಕು ಘಟಕಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ ಉದ್ಘಾಟಿಸಿದರು. ಅಧ್ಯಾತ್ಮದ ಮೂಲಕ ಸಮಾಜವನ್ನು ಜನಪರ ಮಾರ್ಗದಲ್ಲಿ ಕೊಂಡೊಯ್ದವರು ಸಂತ ಸೇವಾಲಾಲರು. ಆಯಾ ಕಾಲಘಟ್ಟದಲ್ಲಿ ಆಗಿ ಹೋದ ಸಾಧು–ಸಂತರು ಸಮಾಜದಲ್ಲಿ ಪರಿವರ್ತನೆ ತರಲು ಶ್ರಮಿಸಿದ್ದಾರೆ. ಅಂಥವರಲ್ಲಿ ಸೇವಾಲಾಲ್ ಕೂಡ ಒಬ್ಬರು. ಜನರಲ್ಲಿರುವ ಮೌಢ್ಯ ಹೋಗಲಾಡಿಸಿ, ಸಮಾಜ ಸುಧಾರಣೆ ಮಾಡಿದರು ಎಂದರು.

ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ಅವರ ಆದರ್ಶವನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ, ಅಂತಹ ಆದರ್ಶಗಳು ಸದಾ ಜೀವಂತವಾಗಿರುತ್ತವೆ ಎಂದು ಹೇಳಿದರು.

ADVERTISEMENT

ಮಾರಿಕಾಂಬಾ ದೇವಾಲಯದ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ ಮಾತನಾಡಿ, ‘ಬಂಜಾರ ಸಮುದಾಯದಲ್ಲಿರುವ ನ್ಯೂನತೆ, ಸವಾಲುಗಳಿಗೆ ಪರಿಹಾರ ಕಂಡುಕೊಂಡು, ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕಾರ್ಯವಾಗಬೇಕು. ಸಮುದಾಯದ ಪೂರ್ವಜರ ಕುರಿತು ಸಂಶೋಧನೆ ಆಗಬೇಕು’ ಎಂದರು.

ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ, ಪೌರಾಯುಕ್ತ ರಮೇಶ ನಾಯಕ, ಸಂಘದ ತಾಲೂಕಾ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ತಿಪ್ಪಣ್ಣ ಪವಾರ, ಪ್ರಮುಖರಾದ ಗೀತಾ ಚೌವ್ಹಾಣ್, ಉಪನ್ಯಾಸಕ ಭೋಜರಾಜ ನಾಯ್ಕ ಇದ್ದರು. ಎಸ್.ಉಮೇಶ ಸ್ವಾಗತಿಸಿದರು. ಆರ್.ಕೆ.ಚವ್ಹಾಣ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.