ADVERTISEMENT

ಕನ್ನಡ ಶಾಲೆ ಉಳಿವಿಗೆ ಕೈಜೋಡಿಸಿ: ಸಾಹಿತಿ ತಮ್ಮಣ್ಣ ಬೀಗಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 8:12 IST
Last Updated 4 ಜನವರಿ 2026, 8:12 IST
ಸಿದ್ದಾಪುರ ತಾಲ್ಲೂಕಿನ ವಾಜಗದ್ದೆ ಶ್ರೀ ದುರ್ಗಾವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನಡೆದ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಅಣ್ಣಪ್ಪ ಎನ್. ಮಳಿಮಠ ಉದ್ಘಾಟಿಸಿದರು. ಶಾಸಕ ಭೀಮಣ್ಣ ನಾಯ್ಕ, ಸಮ್ಮೇಳನದ ಅಧ್ಯಕ್ಷ ತಮ್ಮಣ್ಣ ಬೀಗಾರ ಜತೆಗಿದ್ದರು
ಸಿದ್ದಾಪುರ ತಾಲ್ಲೂಕಿನ ವಾಜಗದ್ದೆ ಶ್ರೀ ದುರ್ಗಾವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನಡೆದ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಅಣ್ಣಪ್ಪ ಎನ್. ಮಳಿಮಠ ಉದ್ಘಾಟಿಸಿದರು. ಶಾಸಕ ಭೀಮಣ್ಣ ನಾಯ್ಕ, ಸಮ್ಮೇಳನದ ಅಧ್ಯಕ್ಷ ತಮ್ಮಣ್ಣ ಬೀಗಾರ ಜತೆಗಿದ್ದರು   

ಸಿದ್ದಾಪುರ: ‘ಕನ್ನಡ ಸಾಹಿತ್ಯದಲ್ಲಿ ಹಿಂದೆ ಮಕ್ಕಳಿಗಾಗಿ ವಿಶೇಷ ಪ್ರಾಕಾರಗಳಿರಲಿಲ್ಲ. ಹಿರಿಯ ಸಾಹಿತಿಗಳು ಮಕ್ಕಳಿಗಾಗಿ ಕೆಲವಷ್ಟು ಕೃತಿಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಮಕ್ಕಳಿಗಾಗಿ ಸಾಹಿತ್ಯ ರಚಿಸುವವರು ಹೆಚ್ಚಾಗುತ್ತಿದ್ದಾರೆ’ ಎಂದು ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಹೇಳಿದರು.

ತಾಲ್ಲೂಕಿನ ವಾಜಗದ್ದೆ ಶ್ರೀ ದುರ್ಗಾವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನಡೆದ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಸಾಹಿತಿ ಅಣ್ಣಪ್ಪ ಎನ್. ಮಳಿಮಠ ಮಾತನಾಡಿ, ‘ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತಿಗಳು ಸಿಗುವುದು ವಿರಳ. ಮಕ್ಕಳ ಸಾಹಿತ್ಯ ಎಂದರೆ ನೆನಪಾಗುವುದು ನಾ.ಡಿಸೋಜ. ಅವರ ಕೃತಿ ಹಾಗೂ ಶೈಲಿಯನ್ನು ಮತ್ತೊಮ್ಮೆ ನೆನಪಿಸುವುದು ತಮ್ಮಣ್ಣ ಬೀಗಾರ ಅವರ ಕೃತಿಗಳು. ಸಾಂಸ್ಕೃತಿಕವಾಗಿ, ಸಾಹಿತ್ಯದಲ್ಲಿ ಮೇರುಮಟ್ಟದಲ್ಲಿರುವ ಸಿದ್ದಾಪುರ ಸ್ವಾತಂತ್ರ್ಯ ಹೋರಾಟದಲ್ಲಿ ಮಂಚೂಣಿಯಲ್ಲಿತ್ತು’ ಎಂದರು.

ADVERTISEMENT

ಶಾಸಕ ಭೀಮಣ್ಣ ನಾಯ್ಕ ನೂತನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ‘ಕನ್ನಡ ಎನ್ನುವುದು ಕೇವಲ ಪುಸ್ತಕಗಳಲ್ಲಿ ಇರಬಾರದು. ಪ್ರತಿಯೊಬ್ಬರೂ ಕೈಜೋಡಿಸಿದರೆ ಕನ್ನಡ ಶಾಲೆಗಳು ಉಳಿಯುತ್ತವೆ. ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಕಳುಹಿಸಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ಆರೋಪ ಮಾಡುವುದು ಸರಿಯಲ್ಲ. ಪಾಲಕರು ಪ್ರಾಥಮಿಕ ಹಂತದಲ್ಲಾದರೂ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು ಆಗ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಯನ್ನಾಡಿದರು.

ವೇದಿಕೆಯಲ್ಲಿ ತಾಲ್ಲೂಕು ದಂಡಾಧಿಕಾರಿ ಎಂ.ಆರ್. ಕುಲಕರ್ಣಿ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಜಿ. ನಾಗರಾಜ್, ಪತ್ರಕರ್ತರಾದ ಮಹಾಬಲ ಸೀತಾಳಬಾವಿ, ನಾಗರಾಜ್ ಮತ್ತಿಗಾರ, ಹಾರ್ಸಿಕಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮಕ್ಕ ಬೋವಿ, ಜಿ.ಜಿ. ಹೆಗಡೆ ಬಾಳಗೋಡು, ನಾಗರಾಜ ಮಾಲ್ಕೋಡ್, ಟಿಎಂಎಸ್ ಸಂಸ್ಥೆಯ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಇದ್ದರು.

ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಕುಂಬ್ರಿಗದ್ದೆ ಸ್ವಾಗತಿಸಿದರು. ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರಾದ ನಾಗೇಶ ಹೆಗಡೆ ನೇರಲಮನೆ, ಬಂಗಾರ್ಯ ನಾಯ್ಕ್ ಹಳಿಯಾಳ, ದೇವರು ಹೆಗಡೆ ಹೊಲಗದ್ದೆ, ದೇಸಾಯಿ ಗೌಡರ್ ಮುಟ್ಟಳ್ಳಿ, ದಿವಾಕರ್ ಹೆಗಡೆ ಮತ್ತಿಗಾರ್, ಶೇಷಗಿರಿ ಸುಬ್ರಾಯ ಹೆಗಡೆ ಹುಲಿಮನೆ ಗೌರವಾರ್ಥವಾಗಿ ದ್ವಾರಗಳ ನಿರ್ಮಾಣ ಮಾಡಲಾಗಿತ್ತು.

ವಿವಿಧ ಸಾಹಿತಿಗಳ ಪುಸ್ತಕ ಮಳಿಗೆಗಳು, ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಗಳು ಸಮ್ಮೇಳನದಲ್ಲಿ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.