ADVERTISEMENT

ಶಿರಸಿ | ಮಾರಿಕಾಂಬೆ ಕಲ್ಯಾಣೋತ್ಸವ ಇಂದು

ದೇವಿಯ ದರ್ಶನಕ್ಕೆ ಕ್ಷಣಗಣನೆ: ನಗರದಲ್ಲಿ ಗರಿಬಿಚ್ಚಿದ ಜಾತ್ರಾ ಸೌಂದರ್ಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:02 IST
Last Updated 24 ಫೆಬ್ರುವರಿ 2026, 8:02 IST
ಶಿರಸಿ ಮಾರಿಕಾಂಬಾ ದೇವಿ ಸಾಗುವ ರಥದ ನಿರ್ಮಾಣ ನಡೆಯುತ್ತಿರುವುದು.
ಶಿರಸಿ ಮಾರಿಕಾಂಬಾ ದೇವಿ ಸಾಗುವ ರಥದ ನಿರ್ಮಾಣ ನಡೆಯುತ್ತಿರುವುದು.   

ಶಿರಸಿ: ಶಕ್ತಿದೇವತೆ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರದ ಬಿಡ್ಕಿಬಯಲು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ. ಭಕ್ತರು ತಿಂಗಳಿಂದ ಎದುರು ನೋಡುತ್ತಿದ್ದ ದೇವಿಯ ಕಲ್ಯಾಣ ಮಹೋತ್ಸವವು ಇಂದು (ಫೆ.24)ರ ರಾತ್ರಿ ದೇವಾಲಯದ ಸಭಾಮಂಟಪದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ.

ದೇವಾಲಯದ ಸಭಾಮಂಟಪದಲ್ಲಿ ರಾತ್ರಿ 11.36ರಿಂದ 11.43ರ ಅವಧಿಯಲ್ಲಿ ಸರ್ವಾಲಂಕಾರ ಭೂಷಿತೆ ಮಾರಿಕಾಂಬೆಯ ಕಲ್ಯಾಣ ಪ್ರತಿಷ್ಠೆ ನೆರವೇರಲಿದೆ. ರಾಜೋಪಚಾರ ಪೂಜಾ ವಿಧಾನಗಳು, ದೇವಿಗೆ ದೃಷ್ಟಿಬೊಟ್ಟು ಇಡುವ ಕೈಂಕರ್ಯಗಳು ನಡೆಯುತ್ತವೆ. ಕಲ್ಯಾಣ ಮಹೋತ್ಸವದ ಭಾಗವಾಗಿ ಮೆರವಣಿಗೆಯಲ್ಲಿ ತರುವ ದೇವಿಯ ಮಂಗಳಸೂತ್ರವನ್ನು ಮಾರಿಕಾಂಬಾ ದೇವಿಯ ತವರು ಮನೆಯಾದ ನಾಡಿಗ ಮನೆತನದವರು ದೇವಿಗೆ ಧಾರಣೆ ಮಾಡುತ್ತಾರೆ. ಮಾರಿಕಾಂಬೆ ಹಾಗೂ ಮರ್ಕಿ–ದುರ್ಗಿಯರಿಗೆ ಮಾಂಗಲ್ಯ ಧಾರಣೆ ಮಾಡುತ್ತಿದ್ದಂತೆ, ಭಕ್ತರು ಚಪ್ಪಾಳೆ ತಟ್ಟಿ, ಜೈಕಾರ ಹಾಕಿ ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಬೂದುಗುಂಬಳ ಕಾಯಿಯ ಸಾತ್ವಿಕ ಬಲಿ ನೀಡಲಾಗುತ್ತದೆ. ಮಂಗಲ ಕಾರ್ಯದ ಅಂಗವಾಗಿ ನಾಡಿಗರ ಮನೆಯಲ್ಲಿ ಹೋಳಿಗೆ ಅಥವಾ ಸಿಹಿ ಊಟ ಬಡಿಸುವ ಕ್ರಮವಿದೆ. ನಾಡಿಗ ಮನೆತನದಿಂದ ನವವಧುವಿಗೆ ಮೊದಲ ಮಂಗಳಾರತಿ, ನಂತರ ಬಾಬುದಾರ ಕುಟುಂಬದವರು ಪೂಜೆ ಸಲ್ಲಿಸುತ್ತಾರೆ.

ಚಕ್ರಸಾಲಿ, ಕಸಬೆ ಗೌಡರು, ಪೂಜಾರಿ, ಕುಂಬಾರ, ಕೇದಾರಿ, ಕಟ್ಟೇರ, ಉಪ್ಪಾರ, ಕುರುಬರು, ಮೇಟಿ, ಮೇತ್ರಿ, ಮೇದಾರ, ಜೋಗತಿಯರು, ಆಸಾದಿ ಹಾಗೂ ಉಗ್ರಾಣಿ ಕುಟುಂಬದವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಬೆಳಕು ಹರಿಯುವ ತನಕ ಪೂಜೆ ಸ್ವೀಕರಿಸುವ ದೇವಿ ಫೆ.25ರ ಬೆಳಿಗ್ಗೆ ರಥವನ್ನೇರುತ್ತಾಳೆ. 7.27ಕ್ಕೆ ಪ್ರಾರಂಭವಾಗುವ ಮೆರವಣಿಗೆ ಬಿಡಕಿಬೈಲು ತಲುಪಿದ ನಂತರ ಜಾತ್ರಾ ಗದ್ದುಗೆಯಲ್ಲಿ ದೇವಿಯ ಪ್ರತಿಷ್ಠಾಪನೆ ನೆರವೇರುತ್ತದೆ. ಪ್ರಸ್ತುತ ರಥ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. 

ADVERTISEMENT

ಹಂಗಾಮಿ ಅಂಗಡಿ ಗುತ್ತಿಗೆದಾರರು ಭರದಲ್ಲಿ ಅಂಗಡಿ ಚೌಕಟ್ಟು ನಿರ್ಮಿಸುತ್ತಿದ್ದಾರೆ. ಮನರಂಜನೆ ಆಟಿಕೆಗಳು ಮೇಲೆದ್ದಿವೆ. ನಾಟಕದ ಕಂಪನಿಗಳು ಟೆಂಟ್ ಕಟ್ಟಿವೆ. ದೇವಿಕೆರೆ, ಕೋಟೆಕೆರೆ ಸುತ್ತಮುತ್ತ ನಗರಸಭೆ ಹರಾಜು ನಡೆಸಿರುವ ಸ್ಥಳಗಳಲ್ಲಿ ಹೊರ ಊರುಗಳಿಂದ ಬಂದಿರುವ ವ್ಯಾಪಾರಸ್ಥರು ಅಂಗಡಿ ಕಟ್ಟುತ್ತಿದ್ದಾರೆ. 

ಉಡಿ ಕಟ್ಟುವಲ್ಲಿ ನಿರತರಾಗಿರುವ ದೇವಾಲಯ ಸಿಬ್ಬಂದಿ 

ಹರಕೆಯ ಉಡಿಗಳು ಸಿದ್ಧ

  ದೇವಿಗೆ ಭಕ್ತರು ಸಲ್ಲಿಸುವ ಮುಖ್ಯ ಸೇವೆಯಾದ 'ಉಡಿ ಸೇವೆ' ಹಾಗೂ ಇತರ ಹರಕೆಗಳ ನಿರ್ವಹಣೆಗಾಗಿ ದೇವಾಲಯದ ಆವರಣದಲ್ಲಿ ಸಿದ್ಧತಾ ಕಾರ್ಯಗಳು ಯುದ್ಧೋಪಾದಿಯಲ್ಲಿ ಸಾಗಿವೆ. ಭಕ್ತರ ಅನುಕೂಲಕ್ಕಾಗಿ ದೇವಾಲಯದ ವತಿಯಿಂದಲೇ ಈಗಾಗಲೇ 5000 ಉಡಿಗಳನ್ನು ಹಾಗೂ ಅಂದಾಜು 40000 ಕುಂಕುಮ ಪೊಟ್ಟಣಗಳು ಮತ್ತು ಕುಂಕುಮದ ಡಬ್ಬಿಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಉಡಿಯಲ್ಲಿ ಬ್ಲೌಸ್ ಪೀಸ್ ಬಳೆ ಕರಿಮಣಿ ಬಾಚಣಗಿ ಅರಿಶಿಣ-ಕುಂಕುಮ ಕನ್ನಡಿ ಕಾಡಿಗೆ ಡಬ್ಬಿ ಅಕ್ಕಿ ಹಾಗೂ ತೆಂಗಿನಕಾಯಿ ಸೇರಿದಂತೆ ಪವಿತ್ರವಾದ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ಅಚ್ಚುಕಟ್ಟಾಗಿ ತಯಾರಿಸಲಾಗಿದೆ.  ಗಿರಿಜಾ ಹಂದ್ರಾಳ ಯಮುನಾ ಆಚಾರಿ ಮಂಗಲಾ ಬೋರ್ಕರ ತನುಜಾ ಕಾನ್ಪೇಟ್ ಶಾರದಾ ದೇವಾಡಿಗ ಗೀತಾ ಶಾನಭಾಗ ಹಾಗೂ ಮಂಜುಳಾ ಕುರುಬರ ಒಳಗೊಂಡ ದೇವಾಲಯದ 15 ಜನರ ತಂಡವು ನಿರಂತರವಾಗಿ ಶ್ರಮಿಸುತ್ತಿದೆ. ಜಾತ್ರೆಯ ಸಮಯದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗಬಾರದು ಮತ್ತು ಪ್ರತಿಯೊಬ್ಬರಿಗೂ ದೇವಿಯ ಪ್ರಸಾದ ಹಾಗೂ ಹರಕೆ ಸಾಮಗ್ರಿಗಳು ಸುಲಭವಾಗಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.