ಸಾವು (ಸಾಂದರ್ಭಿಕ ಚಿತ್ರ)
ಗೆಟ್ಟಿ ಚಿತ್ರ
ಶಿರಸಿ:ಇಲ್ಲಿನ ಮತ್ತಿಘಟ್ಟ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮಣಿಪಾಲ್ ಎಂಐಟಿ ಕಾಲೇಜಿನ ವಿದ್ಯಾರ್ಥಿಯೊಬ್ಬ ನೀರು ಪಾಲಾದ ದುರ್ಘಟನೆ ಸೋಮವಾರ ನಡೆದಿದೆ.
ಮಣಿಪಾಲ್ ಎಂಐಟಿ ಕಾಲೇಜಿನಲ್ಲಿ ಬಿ.ಟೆಕ್ ಎರಡನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿವೋಹಂ ಅನಂತ ತಿವಾರಿ (18) ಮೃತಪಟ್ಟ ದುರ್ದೈವಿ. ಮಣಿಪಾಲ್ನಿಂದ ಬಿ.ಟೆಕ್ ಹಾಗೂ ಜರ್ನಲಿಸಂ ವಿಭಾಗದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡವು ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಆಗಮಿಸಿತ್ತು. ಹೊನ್ನಾವರ ಹಾಗೂ ಶಿರಸಿ ಭಾಗದ ವಿವಿಧೆಡೆ ಭೇಟಿ ನೀಡುವ ಯೋಜನೆಯೊಂದಿಗೆ ಬಂದಿದ್ದ ಈ ತಂಡದ ಕೆಲವು ವಿದ್ಯಾರ್ಥಿಗಳು, ದಟ್ಟ ಅರಣ್ಯದ ನಡುವೆ ಇರುವ ಮನಮೋಹಕ ಮತ್ತಿಘಟ್ಟ ಜಲಪಾತ ವೀಕ್ಷಿಸಲು ತೆರಳಿದ್ದರು. ಈ ವೇಳೆ ಶಿವೋಹಂ ಅವರು ಜಲಪಾತದ ಕೆಳಭಾಗದಲ್ಲಿ ಈಜಲು ನೀರಿಗಿಳಿದಿದ್ದಾರೆ. ಆದರೆ, ನೀರಿನ ಆಳ ಹಾಗೂ ಸುಳಿಯ ಅರಿವಿಲ್ಲದ ಕಾರಣ ಈಜಲು ಸಾಧ್ಯವಾಗದೆ ಅವರು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.