ಶಿರಸಿ: ಲಾಕ್ಡೌನ್ ಆದೇಶದ ನಡುವೆಯೂ ರಸ್ತೆಗಿಳಿಯುವ ಸಾರ್ವಜನಿಕರನ್ನು ನಿಯಂತ್ರಿಸಲು ಬುಧವಾರ ಇಲ್ಲಿ ಮಾರುಕಟ್ಟೆ ಠಾಣೆ ಪೊಲೀಸರು ‘ಘರ್ ವಾಪಸಿ’ ಜಾಗೃತಿ ಅಭಿಯಾನ ನಡೆಸಿದರು.
ಅನವಶ್ಯಕವಾಗಿ ಮನೆಯಿಂದ ಹೊರಬರುವ ಸಾರ್ವಜನಿಕರ ಕೈಯಲ್ಲಿ ಪೊಲೀಸರು, ‘ಮೇರಿ ಸುರಕ್ಷಾ ಮೇರಿ ಜಿಮ್ಮೆದಾರಿ ಹೈ, ಮೈ ಘರ್ ವಾಪಸ್ ಜಾವೊಂಗಾ’ ಎಂಬ ಬರಹವುಳ್ಳ ‘ಘರ್ ವಾಪಸಿ’ ಫಲಕವನ್ನು ಹಿಡಿಸಿದರು. ಅವರಿಂದ ‘ನನ್ನ ಸುರಕ್ಷತೆ ನನ್ನ ಜವಾಬ್ದಾರಿಯಾಗಿದೆ. ನಾನು ಮತ್ತೆ ಮನೆಯಿಂದ ಹೊರಗೆ ಬರುವುದಿಲ್ಲ, ಒಂದು ವೇಳೆ ಹೊರಗೆ ಬಂದಲ್ಲಿ ನನ್ನ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಳ್ಳಿ’ ಎಂದು ಮುಚ್ಚಳಿಕೆ ಪತ್ರ ಬರೆಯಿಸಿಕೊಂಡರು.
ಡಿವೈಎಸ್ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ ಬಿ.ಯು, ಪಿಎಸ್ಐ ನಾಗಪ್ಪ, ಸಿಬ್ಬಂದಿ ಇದ್ದರು. ಸೋಮವಾರ ‘ನನ್ನನ್ನು ಕ್ಷಮಿಸಿ’ ಫಲಕ ಹಿಡಿಸಿ, ತಪ್ಪೊಪ್ಪಿಗೆ ಮಾಡಿಸಿದ್ದ ಪೊಲೀಸರು, ಜನಸಂಚಾರ ನಿಯಂತ್ರಣಕ್ಕೆ ಪ್ರತಿದಿನ ಹೊಸ ತಂತ್ರ ರೂಪಿಸುತ್ತಿದ್ದಾರೆ. ಪೊಲೀಸರ ಶ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.