ADVERTISEMENT

ಶಿರಸಿ | ಹೊಸ ಬೃಹತ್ ಯೋಜನೆಗಳ ಹೇರಿಕೆ ಬೇಡ: ಮನವಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 7:16 IST
Last Updated 15 ಫೆಬ್ರುವರಿ 2026, 7:16 IST
ಶಿರಸಿಯಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸದಸ್ಯರು ಶಾಸಕ ಆರ್.ವಿ.ದೇಶಪಾಂಡೆಗೆ ಅವರಿಗೆ ಮನವಿ ನೀಡಿದರು. 
ಶಿರಸಿಯಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸದಸ್ಯರು ಶಾಸಕ ಆರ್.ವಿ.ದೇಶಪಾಂಡೆಗೆ ಅವರಿಗೆ ಮನವಿ ನೀಡಿದರು.    

ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯು ಈಗಾಗಲೇ ಕಾಳಿ, ಶರಾವತಿ, ಸೀಬರ್ಡ್, ಕೈಗಾದಂಥ ಬೃಹತ್ ಯೋಜನೆಗಳ ಭಾರದಿಂದ ತನ್ನ ಧಾರಣ ಸಾಮರ್ಥ್ಯ ಕಳೆದುಕೊಂಡಿದೆ. ಇನ್ನು ಜಿಲ್ಲೆಯ ಮೇಲೆ ಹೊಸ ಬೃಹತ್ ಯೋಜನೆಗಳನ್ನು ಹೇರುವುದು ಬೇಡ’ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟರು.

ಶನಿವಾರ ಶಿರಸಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು. ‘ಜಿಲ್ಲೆಯ ಈ ವಾಸ್ತವ ಸ್ಥಿತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ’ ಎಂದು ಅವರು ತಿಳಿಸಿದರು.

ಮಾರ್ಚ್ ಮೊದಲ ವಾರದಲ್ಲಿ ನಡೆಯಲಿರುವ ರಾಜ್ಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ, ಜಿಲ್ಲೆಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ರಾಜ್ಯದ ನೀರಾವರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ನೀಡಿದ ಮನವಿಗೆ ದೇಶಪಾಂಡೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. 1992ರಲ್ಲೇ ದೆಹಲಿಗೆ ತೆರಳಿದ್ದ ನಿಯೋಗದಲ್ಲಿ ಎಸ್.ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ ಹಾಗೂ ಜಿ.ಎಸ್.ಹೆಗಡೆ ಅಜ್ಜೀಬಳ ಅವರೊಂದಿಗೆ ಅಂದಿನ ಪರಿಸರ ಸಚಿವರನ್ನು ಭೇಟಿ ಮಾಡಿ ಬೃಹತ್ ಆಣೆಕಟ್ಟು ಯೋಜನೆಯನ್ನು ಕೈಬಿಡುವಂತೆ ಮಾಡಿದ್ದ ಸಂದರ್ಭವನ್ನು ಅವರು ಈ ವೇಳೆ ಸ್ಮರಿಸಿದರು. ಇತ್ತೀಚೆಗೆ ಶಿರಸಿಯಲ್ಲಿ ನಡೆದ ಬೇಡ್ತಿ ಸಮಾವೇಶಕ್ಕೂ ತಾವು ಬೆಂಬಲ ಸೂಚಿಸಿದ್ದನ್ನು ಅವರು ನೆನಪಿಸಿಕೊಂಡರು.

ADVERTISEMENT

ನಿಯೋಗದಲ್ಲಿ ಸಮಿತಿಯ ಮುಖಂಡರಾದ ನಾರಾಯಣ ಗಡಿಕೈ, ದೀಪಕ ದೊಡ್ಡೂರು, ಗಣಪತಿ ಕೆ., ವಿಶ್ವೇಶ್ವರ ಭಟ್, ನಿತಿನ ಕಾಸರಕೋಡ, ಜಿ.ವಿ.ಹೆಗಡೆ, ನಾಗರಾಜ ನಾರ್ವೇಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.