ಶಿರಸಿ: ತಾಲ್ಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿದ ಸೋಮಸಾಗರದ ಸೋಮೇಶ್ವರ ದೇವರ ಮಹಾರಥೋತ್ಸವ ಅಸಂಖ್ಯ ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು.
ಶಿರಸಿ ನಗರ ಹಾಗೂ ದೂರದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಸ್ಥಾನದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾರಥೋತ್ಸವ ಯಶಸ್ವಿಗೊಳ್ಳಲು ಸಾಕ್ಷಿಯಾದರು. ಬೆಳಿಗ್ಗೆ 11.30ರ ವೇಳೆಗೆ ರಥಾರೂಢನಾದ ಸೋಮೇಶ್ವರ ದೇವರ ರಥವನ್ನು ಸಾಂಕೇತಿಕವಾಗಿ ಎಳೆಯಲಾಯಿತು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ವಿದ್ವಾನ್ ಮಹೇಶ ಭಟ್ ಆಚಾರ್ಯತ್ವದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಸಮಿತಿಯ ಮಹೇಂದ್ರ ಹೆಗಡೆ ಮುಳಖಂಡ ಹಾಗೂ ಇನ್ನಿತರರು ರಥೋತ್ಸವದ ಕೈಂಕರ್ಯಕ್ಕೆ ಸಹಕರಿಸಿದರು.
ಸಂಜೆ 5 ಗಂಟೆಗೆ ಆರಂಭಗೊಂಡ ರಥೋತ್ಸವ ಸುಮಾರು ಮುಕ್ಕಾಲು ಕಿ.ಮೀ ರಥಬೀದಿಯಲ್ಲಿ ಸಾಗಿ ಬರುವಾಗ ಸಾವಿರಾರು ಭಕ್ತರು ಜಯಘೋಷ, ವಾದ್ಯ ಮೊಳಗಿಸಿದರು. ಅಮವಾಸ್ಯೆಯ ತೇರು ಎಂದು ಖ್ಯಾತವಾದ ಸೋಮಸಾಗರ ದೇವಸ್ಥಾನಕ್ಕೆ ಅವಳಿ ಶಿವಾಲಯ ಎಂಬ ಪ್ರಸಿದ್ಧಿ ಇದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಆಲಯ ಕೂಡ ಇದಾಗಿದ್ದು, ಪಾಲ್ಗೊಂಡ ಭಕ್ತರು ರಥಾರೂಢನಾದ ಸೋಮೇಶ್ವರ ದರ್ಶನ ಪಡೆದು ಕೃತಾರ್ಥರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.