ಶಿರಸಿ: ಜಿಐ ಟ್ಯಾಗ್ ಪಡೆದುಕೊಂಡಿರುವ ‘ಶಿರಸಿ ಸುಪಾರಿ’ ಚಿತ್ರವನ್ನು ಒಳಗೊಂಡ ಅಂಚೆ ಲಕೋಟೆಯನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.
ನಗರದಲ್ಲಿನಡೆದ ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲಕೋಟೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ‘ಶಿರಸಿಯ ಅಡಿಕೆಗೆ ವಿಶೇಷ ಅಂಚೆ ಲಕೋಟೆ ಮೂಲಕ ಜಗತ್ತಿಗೆ ಪರಿಚಯಿಸುವುದು ಒಳ್ಳೆಯ ಕಾರ್ಯ. ಪ್ರಧಾನಿ ವಿದೇಶಿ ಗಣ್ಯರ ಜತೆ ಸಂವಹನಕ್ಕೆ ಜಿಐ ಟ್ಯಾಗ್ ಲಕೋಟೆ ಬಳಸುವುದರಿಂದ ಅಡಿಕೆಗೆ ಜಾಗತಿಕ ಪ್ರಚಾರ ದೊರೆಯಲು ಅನುಕೂಲವಾಗುತ್ತದೆ’ ಎಂದರು.
‘ಜಿಲ್ಲೆಯಲ್ಲಿ ವಿಶಿಷ್ಟತೆಯ ಹಲವು ಬೆಳೆಗಳಿವೆ. ಅವುಗಳಿಗೂ ಜಿಐ ಟ್ಯಾಗ್ ಪಡೆದುಕೊಳ್ಳಲು ಪ್ರಯತ್ನವಾಗಬೇಕಿದೆ’ ಎಂದರು.
ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಾ.ಎನ್.ವಿನೋದಕುಮಾರ, ‘ಅಂಚೆ ಇಲಾಖೆ ಜಿಐ ಟ್ಯಾಗ್ ಪಡೆದ ಉತ್ಪನ್ನಕ್ಕೆ ಹೆಚ್ಚಿನ ಪ್ರಚಾರ ಒದಗಿಸಿ ಮಾರುಕಟ್ಟೆ ಕಲ್ಪಿಸಿಕೊಳ್ಳಲು ಅನುಕೂಲವಾಗಲೆಂದು ವಿಶೇಷ ಕವರ್ ಮುದ್ರಿಸುತ್ತಿದೆ’ ಎಂದರು.
ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ‘ಶಿರಸಿ ಅಡಿಕೆ ಚಿತ್ರ ಮತ್ತು ಮಾಹಿತಿ ಒಳಗೊಂಡ ವಿಶೇಷ ಕವರ್ ಮೂಲಕ ಅಡಿಕೆಗೆ ಹೆಚ್ಚಿನ ಪ್ರಚಾರ ದೊರೆಯುವ ವಿಶ್ವಾಸವಿದೆ. ಇದು ಭವಿಷ್ಯದಲ್ಲಿ ಅಡಿಕೆಗೆ ಉತ್ತಮ ದರ ಒದಗಿಸುವ ನಂಬಿಕೆಯೂ ಮೂಡಿದೆ’ ಎಂದರು.
ಟಿಎಸ್ಎಸ್ ಸಂಸ್ಥೆಯ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಅಂಚೆ ಅಧೀಕ್ಷಕ ಬಿ.ಶಂಕರ, ವೆಂಕಟೇಶ ಬಾದಾಮಿಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.