ಹರೀಶ ನಾಯ್ಕ
ಶಿರಸಿ: ವರ್ಷಗಳ ಹಿಂದೆ ಬಳಕೆಯಿಲ್ಲದ ಬೀಳೂರಿನ ಬರಡು ಭೂಮಿಯೀಗ ಕಲ್ಲಂಗಡಿ ಬೆಳೆಯಿಂದ ನಳನಳಿಸುತ್ತಿದೆ. ವಾಣಿಜ್ಯ ಬೆಳೆ ಅಡಿಕೆಯ ಜತೆ ಉಪ ಬೆಳೆಯಾಗಿ ಕಲ್ಲಂಗಡಿ ಬೆಳೆದ ಕೃಷಿಕರೊಬ್ಬರು ಬೋರ್ವೆಲ್ ನೀರು ಬಳಸಿಕೊಂಡು ಅಂತರ್ಗತ ಹನಿ ನೀರಾವರಿ ಪದ್ಧತಿ ಮೂಲಕ ಉತ್ತಮ ಇಳುವರಿಯ ಜತೆ ಲಾಭ ಪಡೆಯುತ್ತಿದ್ದಾರೆ.
ಶಿರಸಿಯ ಪೂರ್ವ ಭಾಗ ಬನವಾಸಿ ಹೋಬಳಿ ಅರೆ ಮಲೆನಾಡು ವಾತಾವರಣ ಹೊಂದಿದ್ದು, ಬೀಳೂರು ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿನ ಕೃಷಿಕ ಹರೀಶ ನಾಯ್ಕ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಕಳೆದ ಎರಡು ವರ್ಷಗಳಿಂದ ಕಲ್ಲಂಗಡಿ ಕೃಷಿ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ಮಲ್ಚಿಂಗ್ ಜತೆ ಅಂತರ್ಗತ ಹನಿ ನೀರಾವರಿ ಪದ್ಧತಿ ಮೂಲಕ ಬೆಳೆ ಬೆಳೆದಿರುವ ಇವರು ಎಕರೆಗೆ 18 ಟನ್ನಷ್ಟು ಇಳುವರಿ ಪಡೆಯುವ ಮೂಲಕ ಉತ್ತಮ ಆದಾಯಗಳಿಸುವಲ್ಲಿ ಸಫಲರಾಗಿದ್ದಾರೆ.
'ಭೂಮಿಯನ್ನು ಉಳುಮೆ ಮಾಡಿ ತಿಪ್ಪೆ ಗೊಬ್ಬರ, ಅಲ್ಪ ಪ್ರಮಾಣದ ರಾಸಾಯನಿಕ ಮತ್ತು ಪೋಷಕಾಂಶಗಳನ್ನು ಹಾಕಿ, ಮಲ್ಚಿಂಗ್ ನಾಟಿ ಪದ್ಧತಿಯಲ್ಲಿ ಒಂದು ಅಡಿ ಅಂತರದಂತೆ 15–20 ಸಾವಿರ ಬ್ಲ್ಯಾಕ್ ಮಾದರಿಯ ಕಲ್ಲಂಗಡಿ ಸಸಿಗಳನ್ನು ನೆಡಲಾಗಿದೆ. ಅಂದಾಜು 50 ದಿನಗಳಲ್ಲಿ ಹೂವು ಮತ್ತು ಮಿಡಿ ಬಿಡುತ್ತವೆ. ಈ ಪ್ರಯೋಗದಿಂದ ಕೀಟ ಬಾಧೆ ಮತ್ತು ಕಳೆ ಸಮಸ್ಯೆ ಕಡಿಮೆಯಾಗಿ ಅಧಿಕ ಇಳುವರಿ ದೊರೆಯುತ್ತದೆ’ ಎನ್ನುತ್ತಾರೆ ಬೆಳೆಗಾರ ಹರೀಶ್ ನಾಯ್ಕ.
'ಉಳುಮೆ, ಗೊಬ್ಬರ, ಪೋಷಕಾಂಶಗಳು, ಮಲ್ಚಿಂಗ್ ಪದ್ಧತಿ ಮತ್ತು ಕೀಟನಾಶಕ ದ್ರಾವಣ, ಕೂಲಿ ಆಳು ಖರ್ಚು ಹೀಗೆ ಒಂದು ಎಕರೆಗೆ ಅಂದಾಜು ₹80 ಸಾವಿರ ಖರ್ಚು ಬಂದಿದೆ. ಸದ್ಯ ಎಕರೆಗೆ 15–18 ಟನ್ ಕಲ್ಲಂಗಡಿ ಇಳುವರಿ ಬಂದಿದ್ದು, ಪ್ರತಿ ಟನ್ಗೆ ಸರಾಸರಿ ₹7ರಿಂದ ₹8 ಸಾವಿರ ದರ ದೊರೆತಿದೆ. ಹಾಕಿದ ಬಂಡವಾಳ ತೆಗೆದು ಹೆಚ್ಚುವರಿ ಆದಾಯಕ್ಕೆ ಕೊರತೆ ಇಲ್ಲ’ ಎನ್ನುತಾರೆ ಅವರು.
'ಪ್ಲಾಸ್ಟಿಕ್ ಹಾಳೆ ಬಳಸಿ ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಮಾದರಿ ಅನುಸರಿಸುತ್ತಿದ್ದೇವೆ. ಈ ಮಾದರಿಯ ಕೃಷಿಯಲ್ಲಿ ಬಳ್ಳಿಗಳಿಗೆ ರೋಗ ಬಾಧೆ, ಇಬ್ಬನಿಗೆ ಕಲ್ಲಂಗಡಿ ಹೂವು ಉದುರುವ ಸಮಸ್ಯೆ ಕಡಿಮೆ ಆಗಿದೆ. ಹಣ್ಣುಗಳ ಬೆಳವಣಿಗೆಯೂ ಉತ್ತಮವಾಗಿದೆ. ಉತ್ತಮ ದರ ಲಭಿಸಿದರೆ ಉಪಬೆಳೆಯಾಗಿಯೂ ಪ್ರಧಾನ ಬೆಳೆಯಷ್ಟೇ ಆದಾಯ ಸಿಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.
‘ಮಾರುಕಟ್ಟೆಯಲ್ಲಿ ಈಗ ಬೇಡಿಕೆ ಹೆಚ್ಚಿದ್ದರೂ ಉತ್ಪಾದನೆ ಪ್ರಮಾಣ ಅಧಿಕವಿರುವ ಕಾರಣ ದರ ಕಡಿಮೆ. ನೇರ ಮಾರುಕಟ್ಟೆ ವ್ಯವಸ್ಥೆ ಈ ಭಾಗದಲ್ಲಿ ಇಲ್ಲದ ಕಾರಣ ಮಧ್ಯವರ್ತಿಗಳ ಮೂಲಕವೇ ಮಾರಬೇಕು. ಮಾರುಕಟ್ಟೆಯಲ್ಲಿ ಒಂದು ಕೆಜಿ ಕಲ್ಲಂಗಡಿಗೆ ₹25 ಇದ್ದರೆ ನಮಗೆ ಇಲ್ಲಿ ಸಿಗುವುದು ₹7 ರಿಂದ ₹9 ಮಾತ್ರ. ಇದರಿಂದ ಕೃಷಿಕರಿಗೆ ಲಾಭ ಕಡಿಮೆ' ಎಂದು ಹೇಳಿದರು.
ಸಾಕಷ್ಟು ಶ್ರಮ ಮತ್ತು ಖರ್ಚಿನೊಂದಿಗೆ ಕಲ್ಲಂಗಡಿ ಬೆಳೆದಿದ್ದೇನೆ. ಇದೀಗ ಉತ್ತಮ ಫಸಲು ಕೈಗೆ ಬಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ತಳಿ ಬೆಳೆ ಬೆಳೆಯಲು ಹುಮ್ಮಸ್ಸು ಬಂದಿದೆ.
–ಹರೀಶ್ ನಾಯ್ಕ ಕಲ್ಲಂಗಡಿ ಬೆಳೆಗಾರ
ಬೆಳೆಗಾರರಿಂದ ಕಲ್ಲಂಗಡಿಗೆ ಮಾರುಕಟ್ಟೆ ಕಲ್ಪಿಸುವಂತೆ ಬೇಡಿಕೆ ಬಂದರೆ ಮಾರಾಟಗಾರರನ್ನು ಬೆಳೆಗಾರರ ಜತೆ ಸಂಪರ್ಕಕ್ಕೆ ತಂದು ಯೋಗ್ಯ ದರ ನೀಡುವಂತೆ ಕೋರಲಾಗುವುದು.
–ಗಣೇಶ ಹೆಗಡೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.