ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಖಂಡಗ್ರಾಸ ಸೂರ್ಯಗ್ರಹಣವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದಆಚರಿಸಲಾಯಿತು. ಮಳೆಯೂ ಅನುಕೂಲ ಮಾಡಿಕೊಟ್ಟ ಕಾರಣ ಇಲ್ಲಿಯ ಮೇನ್ ಬೀಚ್ನಲ್ಲಿ ಸ್ಥಳೀಯರೂ ಸೇರಿದಂತೆ ನೂರಾರು ಜನರು ಗ್ರಹಣದ ಸಮಯದಲ್ಲಿ ಸಮುದ್ರ ಸ್ನಾನ ಮಾಡಿದರು.
ಸಮುದ್ರ ರಾಜನ ಪೂಜೆ, ಪಿತೃಗಳಿಗೆ ತಿಲ ತರ್ಪಣ, ಸಮುದ್ರ ದಂಡೆಯಲ್ಲಿ ಕುಳಿತ ಪುರೋಹಿತರಿಗೆ ದಾನ ಧರ್ಮ ಮಾಡುವ ಆಚರಣೆನ್ನು ಪಾಲಿಸಿದರು.ಕೋವಿಡ್ ಕಾರಣದಿಂದ ನಾಡಿನ ಹಾಗೂಬೇರೆ ರಾಜ್ಯಗಳಿಂದಗ್ರಹಣ ಆಚರಣೆಗೆ ಬಂದವರಸಂಖ್ಯೆ ಬಹಳ ಕಡಿಮೆ ಇತ್ತು.
ಮಹಾಗಣಪತಿ, ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಭಕ್ತರಿಗೆ ಅನುಮತಿನಿರಾಕರಿಸಲಾಗಿತ್ತು. ದರ್ಶನ ಪಡೆಯಲು ಮಾತ್ರ ಅವಕಾಶ ನೀಡಲಾಗಿತ್ತು. ಅನೇಕ ಜನ ಸಮುದ್ರ ದಂಡೆಯ ಮೇಲೆ ಕುಳಿತು ಗ್ರಹಣ ಬಿಡುವ ತನಕ ಜಪ, ಧ್ಯಾನ ಮಾಡಿದ್ದು ಕಂಡುಬಂತು. ಗ್ರಹಣವು ಭಾನುವಾರ ಆದ ಕಾರಣ ‘ಚೂಡಾಮಣಿ’ ಎಂದೂ ಕರೆಯಲಾಗುತ್ತದೆ ಎಂದು ಧಾರ್ಮಿಕ ಮುಖಂಡರು ತಿಳಿಸಿದರು.
ಲಾಕ್ಡೌನ್ನಿಂದಾಗಿಗೋಕರ್ಣದಲ್ಲಿಯೇ ಇರುವಅನೇಕ ವಿದೇಶಿ ಪ್ರವಾಸಿಗರು, ಗ್ರಹಣದ ಆಚರಣೆಯಲ್ಲಿ ತೊಡಗಿಕೊಂಡರು. ಸ್ಥಳೀಯರಂತೆ ಸಮುದ್ರ ಸ್ನಾನ ಮಾಡಿ ಜಪ, ಧ್ಯಾನ ಮಾಡಿದರು.
‘ಗ್ರಹಣದ ಸಮಯದಲ್ಲಿ ಪವಿತ್ರ ಗೋಕರ್ಣ ಕ್ಷೇತ್ರದಲ್ಲಿ ಇರುವುದುನಮ್ಮ ಭಾಗ್ಯ. ನಾವು ಸಹ ಇಲ್ಲಿಯ ಜನರ ಹಾಗೇ ಗ್ರಹಣ ಆಚರಣೆ ಮಾಡಿ ಮನಸ್ಸಿಗೆ ಶಾಂತಿ, ನೆಮ್ಮದಿ ಪಡೆಯುತ್ತೇವೆ’ ಎಂದು ರಷ್ಯನ್ ಮಹಿಳೆ ಮಾರಿಯಾ ನುಡಿದರು.
ಸಮುದ್ರದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸರ ಕಾವಲು ಹಾಕಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.