ADVERTISEMENT

ಇತಿಹಾಸ ಪ್ರಿಯರಿಗೆ ಕುತೂಹಲ ಮೂಡಿಸಿದ ಗದ್ದೆಯ ಬದುವಿನಲ್ಲಿನ ‘ದಿಬ್ಬಣಗಲ್ಲು’

​ಪ್ರಜಾವಾಣಿ ವಾರ್ತೆ
Published 12 ಮೇ 2019, 14:04 IST
Last Updated 12 ಮೇ 2019, 14:04 IST
ಕಾರವಾರ ತಾಲ್ಲೂಕಿನ ವಿರ್ಜೆಯಲ್ಲಿರುವ ‘ದಿಬ್ಬಣಗಲ್ಲು’ಗಳು.
ಕಾರವಾರ ತಾಲ್ಲೂಕಿನ ವಿರ್ಜೆಯಲ್ಲಿರುವ ‘ದಿಬ್ಬಣಗಲ್ಲು’ಗಳು.   

ಕಾರವಾರ:ಅಲ್ಲೊಂದು ಮಹಾದೇವ ದೇವಸ್ಥಾನ. ಅದರ ಎದುರು ವಿಶಾಲವಾದ ಗದ್ದೆ. ಅದರ ಬದುಗಳಲ್ಲಿ 10ಕ್ಕೂ ಅಧಿಕ ವಿಶೇಷ ಕಲ್ಲುಗಳು.

ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿರ್ಜೆ ಎಂಬಲ್ಲಿರುವ ಈ ಕಲ್ಲುಗಳು ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರ ಕುತೂಹಲಕ್ಕೆ ಕಾರಣವಾಗಿದೆ. ಕಪ್ಪು ಕಲ್ಲುಗಳ ಮೇಲೆ ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ಮಾಸ್ತಿಗಲ್ಲು, ವೀರಗಲ್ಲುಗಳ ಮಾದರಿಯಲ್ಲೇ ಇವುಗಳಿದ್ದು,ನೋಡಲೂ ಆಕರ್ಷಕವಾಗಿವೆ.

ಗ್ರಾಮದ ಹಿರಿಯ 80 ವರ್ಷದ ಗಣಪತಿ ತಿಮ್ಮಾಗೌಡ ಹೇಳುವ ಪ್ರಕಾರ ಇವುಗಳನ್ನು ‘ದಿಬ್ಬಣಗಲ್ಲು’ಗಳೆಂದು ಕರೆಯಲಾಗುತ್ತದೆ. ‘ನಾನು ಸಣ್ಣವನಿದ್ದಾಗಿನಿಂದಲೂ ಈ ಕಲ್ಲುಗಳಿವೆ. ಎಷ್ಟು ವರ್ಷಗಳ ಇತಿಹಾಸ ಇದೆಯೋ ಗೊತ್ತಿಲ್ಲ. ಅದಕ್ಕೆ ಪೂಜೆ ಮಾಡುವುದಿಲ್ಲ. ಆದರೆ, ಮಹಾದೇವ ದೇವಸ್ಥಾನಕ್ಕೆ ಸೇರಿದ್ದು ಎಂದು ನಂಬಿದ್ದೇವೆ’ ಎಂದು ನೆನಪಿಸಿಕೊಂಡರು.

ADVERTISEMENT

‘ನನ್ನ ಹಿರಿಯರು ಹೇಳಿದ ಪ್ರಕಾರ ಆ ಕಾಲದಲ್ಲಿ ಎರಡು ಮದುವೆಗಳ ದಿಬ್ಬಣಗಳು ಎದುರು– ಬದುರಾದವು. ಅದು ಅಶುಭ ಲಕ್ಷಣವಾಗಿತ್ತಂತೆ. ದೇವರ ಶಾಪದಿಂದ ಎಲ್ಲರೂ ಕಲ್ಲುಗಳಾದರಂತೆ’ ಎಂದು ನಕ್ಕರು.

ತೆರೆದ ವಾತಾವರಣದಲ್ಲಿರುವಕಲ್ಲುಗಳು ನಿಧಾನವಾಗಿ ಬಿಸಿಲು, ಮಳೆಗೆ ಕರಗುತ್ತಿವೆ. ಅವುಗಳಇತಿಹಾಸವೇನು, ಯಾವ ಘಟನೆಗೆ ಸಂಬಂಧಿಸಿದ್ದು ಎಂಬ ಬಗ್ಗೆ ಅಧ್ಯಯನ ಆಗಬೇಕು. ಅವುಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸಬೇಕು ಎನ್ನುವುದು ಇತಿಹಾಸ ಪ್ರಿಯರಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.