ಹಳಿಯಾಳ: ಮಕ್ಕಳ ಕ್ರೀಡಾ ಉತ್ತೇಜನಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ಸಹಾಯ ಸಹಕಾರ ನೀಡುತ್ತಿವೆ. ಅವುಗಳ ಸದುಪಯೋಗ ಪಡೆದು ಮಕ್ಕಳು ರಾಜ್ಯ, ರಾಷ್ಟ್ರ ,ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಭಾನುವಾರ ಇಲ್ಲಿನ ಕ್ರೀಡಾ ವಸತಿ ನಿಲಯದಲ್ಲಿ ವಿಶೇಷ ಕ್ರೀಡಾ ತರಬೇತಿ ಪಡೆದ ಸಿದ್ಧಿ ಜನಾಂಗದ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳ ಕಿಟ್ ಜೊತೆಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಿ ಮಾತನಾಡಿದರು. ಪ್ರತಿಯೊಬ್ಬ ಕ್ರೀಡಾ ಪಟುಗಳಿಗೆ ಸಾಧನೆಯ ಗುರಿ ಇರಬೇಕು, ಕ್ರೀಡೆಯ ಜೊತೆಗೆ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಕಲೆಯಲ್ಲಿಯೂ ಸಹ ಪಾಲ್ಗೊಳ್ಳಿ. ಹಳಿಯಾಳದ ಶಿವಾಜಿ ಕ್ರೀಡಾಂಗಣದ ಅಭಿವೃದ್ಧಿಗಾಗಿ ₹ 1.50 ಕೋಟಿ ಮಂಜೂರಾಗಿದೆ ಎಂದರು.
ಎಂಎಲ್ಸಿ ಎಸ್.ಎಲ್. ಘೋಟ್ನೇಕರ ಮಾತನಾಡಿದರು. ಯುವ ಸಬಲೀಕರಣ ಕ್ರೀಡಾ ಇಲಾಖೆ ಬೆಂಗಳೂರಿನ ಉಪ ನಿರ್ದೇಶಕ ಪಿ. ರಮೇಶ ಮಾತನಾಡಿ, ಸಿದ್ಧಿ ಜನಾಂಗದ 300 ಮಕ್ಕಳಿಗೆ ಡಿ. 22 ರಿಂದ ಫೆ. 15 ರವರೆಗೆ ಶಿಬಿರವನ್ನು ಏರ್ಪಡಿಸಿ ತರಬೇತಿ ನೀಡಲಾಗಿದೆ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರದ ಸಹಾಯಕ ನಿರ್ದೇಶಕ ಜಿ. ಗಾಯತ್ರಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಮುಖಂಡ ಉಮೇಶ ಬೊಳಶೆಟ್ಟಿ, ಸುಭಾಷ ಕೊರ್ವೇಕರ, ತಹಶೀಲ್ದಾರ ಪ್ರವೀಣ ಹುಚ್ಚನ್ನವರ ಡಾ. ಅಂತೋನಿ ,ತರಬೇತುದಾರ ತುಕಾರಾಮ ಗೌಡಾ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.