ಕಾರವಾರ: ಎಸ್ಸೆಸ್ಸೆಲ್ಸಿಯ ಮೊದಲ ದಿನದ ಪರೀಕ್ಷೆಯು ಜಿಲ್ಲೆಯ 122 ಕೇಂದ್ರಗಳಲ್ಲಿ ಸೋಮವಾರ ನಡೆಯುತ್ತಿದೆ. ವಿದ್ಯಾರ್ಥಿಗಳು ಎರಡು ತಾಸು ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಗಳಿಗೆ ತಲುಪಿದರು. ಅವರ ದೇಹದ ಉಷ್ಣತೆ ಪರೀಕ್ಷಿಸಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಕೇಂದ್ರಗಳ ಕೊಠಡಿಗಳಿಗೆ ಕಳುಹಿಸಲಾಯಿತು. ಭಾನುವಾರವಿಡೀ ಅಬ್ಬರಿಸಿದ್ದ ಮಳೆ ವಿರಾಮ ನೀಡಿದ್ದು, ಮಕ್ಕಳಿಗೆ ಬರಲು ಸಾಕಷ್ಟು ಅನುಕೂಲವಾಯಿತು.
ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 10,252 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10,033 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಕಾರವಾರ ತಾಲ್ಲೂಕಿನ ಉಳಗಾ ಮಹಾಸತಿ ವಿದ್ಯಾಲಯದಲ್ಲಿ ಗೋವಾದ 67 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅವರಿಗೆ ರಾಜ್ಯದ ಗಡಿ, ಮಾಜಾಳಿಯ ಚೆಕ್ಪೋಸ್ಟ್ನಲ್ಲಿ ಆರೋಗ್ಯ ತಪಾಸಣೆ ಮಾಡಿಯೇ ಬರಲು ಅವಕಾಶ ನೀಡಲಾಗಿದೆ.
ಪರೀಕ್ಷೆಯ ಹಿನ್ನೆಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಭಾನುವಾರವೇ ಸ್ಯಾನಿಟೈಸ್ ಮಾಡಿ, ಡೆಸ್ಕ್ಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಬರೆಯಲಾಗಿತ್ತು. ಪರಸ್ಪರ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪ್ರತಿ ಕೊಠಡಿಯಲ್ಲಿ ಗರಿಷ್ಠ 12 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ಮಕ್ಕಳ ಸಂಭ್ರಮ:
ಹಲವು ತಿಂಗಳ ಬಳಿಕ ಶಾಲೆಯತ್ತ ಬಂದ ವಿದ್ಯಾರ್ಥಿಗಳು, ತಮ್ಮ ಗೆಳೆಯರನ್ನು ಕಂಡು ಸಂತಸಪಟ್ಟರು. ಪರೀಕ್ಷೆಯ ನೆಪದಲ್ಲಾದರೂ ಭೇಟಿಯಾಗಲು ಅವಕಾಶವಾಯಿತು ಎಂದು ವಿದ್ಯಾರ್ಥಿ ಗೌರವ್ ನಗುತ್ತ ಸಂತಸ ವ್ಯಕ್ತಪಡಿಸಿದ.
'ಬದಲಾದ ಪರೀಕ್ಷಾ ಪದ್ಧತಿಯ ಬಗ್ಗೆ ಅರಿವಿದೆ. ಶಿಕ್ಷಕರು ಸಾಕಷ್ಟು ಮಾಹಿತಿ ಕೊಟ್ಟಿದ್ದಾರೆ' ಎಂದೂ ಹೇಳಿದ. ಪರೀಕ್ಷಾ ಕೇಂದ್ರದ ಹೊರಗೆ ಸಾಕಷ್ಟು ಪಾಲಕರು ತಮ್ಮ ಮಕ್ಕಳಿಗೆ ಶುಭಾಶಯ ಹೇಳಿ ಕಳುಹಿಸುತ್ತಿದ್ದುದೂ ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.