ADVERTISEMENT

ಅರಣ್ಯಶಾಸ್ತ್ರ ಪದವೀಧರರಿಗೆ ಆದ್ಯತೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 15:50 IST
Last Updated 5 ಏಪ್ರಿಲ್ 2022, 15:50 IST
ಅರಣ್ಯ ಇಲಾಖೆಯ ವಿವಿಧ ವೃಂದದ ನೇಮಕಾತಿಗೆ ಅರಣ್ಯಶಾಸ್ತ್ರ ಪದವಿ ಕಡ್ಡಾಯಗೊಳಿಸುವಂತೆ ಒತ್ತಾಯಿಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿದರು
ಅರಣ್ಯ ಇಲಾಖೆಯ ವಿವಿಧ ವೃಂದದ ನೇಮಕಾತಿಗೆ ಅರಣ್ಯಶಾಸ್ತ್ರ ಪದವಿ ಕಡ್ಡಾಯಗೊಳಿಸುವಂತೆ ಒತ್ತಾಯಿಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿದರು   

ಶಿರಸಿ: ಅರಣ್ಯ ಇಲಾಖೆಯು ಗ್ರುಪ್ ಎ, ಬಿ ಮತ್ತು ಸಿ ವೃಂದದ ಹುದ್ದೆಗಳಿಗೆ ಆಯ್ಕೆ ಮಾಡುವ ಅಭ್ಯರ್ಥಿಗಳು ಕಡ್ಡಾಯವಾಗಿ ಅರಣ್ಯಶಾಸ್ತ್ರ ಪದವಿ ಪಡೆದುಕೊಳ್ಳುವಂತೆ ಆದೇಶ ಮಾಡಲು ಒತ್ತಾಯಿಸಿ ಇಲ್ಲಿನ ಅರಣ್ಯಶಾಸ್ತ್ರ ಪದವಿ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾಲೇಜುಆವರಣದಿಂದ ಹೊರಟ ಮೆರವಣಿಗೆ ಮುಖ್ಯ ರಸ್ತೆಯ ಮೂಲಕ ಸಾಗಿ ಬಿಡಕಿಬೈಲ್, ಜೂವೃತ್ತದ ಮಾರ್ಗವಾಗಿ ಸಾಗಿತು. ಈ ವೇಳೆ ನ್ಯಾಯ ಒದಗಿಸುವಂತೆ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಹಳೆ ಬಸ್ ನಿಲ್ದಾಣದ ಎದುರು ಅರಣ್ಯಶಾಸ್ತ್ರ ಪದವಿ ವಿದ್ಯಾರ್ಥಿಗಳ ಸಂಕಷ್ಟ ಬಿಂಬಿಸುವ ಬೀದಿ ನಾಟಕ ಪ್ರದರ್ಶಿಸಲಾಯಿತು.

‘ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆ ನೇಮಕಾತಿ ವೇಳೆ ಅರಣ್ಯಶಾಸ್ತ್ರ ಪದವೀಧರರ ಹೊರತಾದವರಿಗೆ ಆದ್ಯತೆ ಹೆಚ್ಚಿಸಲಾಗುತ್ತಿದೆ. ಇದರಿಂದ ನಿರ್ದಿಷ್ಟ ಪದವಿ ಪಡೆದ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳಲಾಗುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ವಲಯ ಅರಣ್ಯಾಧಿಕಾರಿ ಹುದ್ದೆಗೆ ಈ ಮೊದಲು ಶೇ.75:25 ಅನುಪಾತ ಜಾರಿಯಲ್ಲಿತ್ತು. ಅದನ್ನು 50:50ಕ್ಕೆ ಇಳಿಕೆ ಮಾಡಿದ್ದು ಸರಿಯಲ್ಲ. ಕೂಡಲೇ ಸರ್ಕಾರ ಆದೇಶ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.

ಕರ್ನಾಟಕ ಅರಣ್ಯಶಾಸ್ತ್ರ ಪದವೀಧರರು ಮತ್ತು ವಿದ್ಯಾರ್ಥಿಗಳ ಸಂಘಟನೆ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಅಧ್ಯಕ್ಷ ಕೇಶವ ರೆಡ್ಡಿ ಜಿ., ಉಪಾಧ್ಯಕ್ಷ ಹೇಮಂತ್ ಎಚ್.ಎಸ್., ಅವಿನಾಶ್ ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.