ADVERTISEMENT

ಯಲ್ಲಾಪುರ| ನದಿಯಲ್ಲಿ ಮುಳುಗಿದ ಲಾರಿ ತೆರವು: ನಾಪತ್ತೆಯಾದವನ ಸುಳಿವಿಲ್ಲ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 13:37 IST
Last Updated 25 ಆಗಸ್ಟ್ 2022, 13:37 IST
ಯಲ್ಲಾಪುರ ತಾಲ್ಲೂಕಿನ ಅರಬೈಲ್ ಬಳಿಯ ಪಣಸಗುಳಿ ಸೇತುವೆ ಬಳಿ ಬುಧವಾರ ಮುಳುಗಿ ಸಂಪೂರ್ಣ ನಜ್ಜುಗುಜ್ಜಾಗಿರುವ ಲಾರಿಯನ್ನು ಎಸ್.ಡಿ.ಆರ್.ಎಫ್ ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಕ್ರೇನ್ ಸಹಾಯದಿಂದ ಗುರುವಾರ ಮೇಲೆತ್ತಿದರು
ಯಲ್ಲಾಪುರ ತಾಲ್ಲೂಕಿನ ಅರಬೈಲ್ ಬಳಿಯ ಪಣಸಗುಳಿ ಸೇತುವೆ ಬಳಿ ಬುಧವಾರ ಮುಳುಗಿ ಸಂಪೂರ್ಣ ನಜ್ಜುಗುಜ್ಜಾಗಿರುವ ಲಾರಿಯನ್ನು ಎಸ್.ಡಿ.ಆರ್.ಎಫ್ ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಕ್ರೇನ್ ಸಹಾಯದಿಂದ ಗುರುವಾರ ಮೇಲೆತ್ತಿದರು   

ಯಲ್ಲಾಪುರ: ತಾಲ್ಲೂಕಿನ ಪಣಸಗುಳಿಯ ತಾತ್ಕಾಲಿಕ ಸೇತುವೆಯಿಂದ ಬುಧವಾರ ಗಂಗಾವಳಿ ನದಿಗೆ ಉರುಳಿದ ಲಾರಿಯನ್ನು ಗುರುವಾರ ಮೇಲೆತ್ತಲಾಯಿತು. ಆದರೆ, ಲಾರಿಯೊಂದಿಗೆ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯ ಸುಳಿವು ಸಿಕ್ಕಿಲ್ಲ.

‘ಪರಿಣಿತ ಈಜುಗಾರರನ್ನು ನದಿಗೆ ಇಳಿಸಿ, ಮುಳುಗಿದ ಲಾರಿಯನ್ನು ಪರಿಶೀಲಿಸಲಾಯಿತು. ಆದರೆ, ಅದರಲ್ಲಿ ನದಿಪಾಲಾಗಿದ್ದ ಸಂದೀಪ ಆಗೇರ (35) ಪತ್ತೆಯಾಗಿಲ್ಲ. ಅವರು ಕುಮಟಾ ಸಮೀಪದ ಬಂಕಿಕೊಡ್ಲ ಬಳಿಯ ಹನೇಹಳ್ಳಿಯವರು. ಅವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಯಲ್ಲಾಪುರ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಂಕೋಲಾ ತಾಲ್ಲೂಕಿನ ಕೈಗಡಿಯನ್ನು ಸಂಪರ್ಕಿಸುವ, ಯಲ್ಲಾಪುರ ತಾಲ್ಲೂಕಿನ ಪಣಸಗುಳಿ ಸೇತುವೆಯ ಮೇಲೆ ಬುಧವಾರ ನೀರು ಹರಿಯುತ್ತಿತ್ತು. ಅದರಲ್ಲಿ ಸಾಗಿ ಬಂದ ಲಾರಿಯು ನದಿಗೆ ಬಿದ್ದಿತ್ತು. ಅದರಲ್ಲಿ ಒಟ್ಟು ಆರು ಮಂದಿಯಿದ್ದು, ಐವರು ಪ್ರಾಣಾಪಾಯದಿಂದ ಬಚಾವಾಗಿದ್ದರು. ಲಾರಿಯನ್ನು ಮೇಲೆತ್ತಲು ಬುಧವಾರವೇ ಕಾರ್ಯಾಚರಣೆ ಮಾಡಲಾಗಿತ್ತು. ಕತ್ತಲಾದ ಬಳಿಕ ಸ್ಥಗಿತಗೊಳಿಸಲಾಗಿತ್ತು.

ADVERTISEMENT

ಗುರುವಾರ ಮತ್ತೆ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್.ಡಿ.ಆರ್.ಎಫ್) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಲಾರಿಯನ್ನು ಮೇಲೆತ್ತಲು ಮತ್ತು ನಾಪತ್ತೆಯಾದ ವ್ಯಕ್ತಿಯ ಪತ್ತೆಗಾಗಿ ಶೋಧ ಕಾರ್ಯ ಮಾಡಿದರು.

ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿದ್ದರೂ ಲಾರಿ ಮುಳುಗಿದ ಸ್ಥಳದಲ್ಲಿ ಆಳವಾಗಿದೆ. ಹಾಗಾಗಿ ಲಾರಿ ಮುಳುಗಿಕೊಂಡೇ ಇತ್ತು. ಕ್ರೇನ್ ಬಳಸಿ ಲಾರಿಯನ್ನು ಅರ್ಧ ಮೇಲಕ್ಕೆತ್ತಿದಾಗ, ಹಗ್ಗ ತುಂಡಾಯಿತು. ಇದರಿಂದ ಕಾರ್ಯಾಚರಣೆ ಸ್ವಲ್ಪ ವಿಳಂಬವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.