ಜೊಯಿಡಾ: ತಾಲ್ಲೂಕಿನ ಸುಪಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಸುಪಾ ಜಲಾಶಯಕ್ಕೆ ನೀರನ್ನು ಹರಿಸಲು ನಿರ್ಮಿಸಿರುವ ಅಪ್ಪರ ಕಾನೇರಿ ಜಲಾಶಯ ತುಂಬಿದ್ದು ಕುಂಡಲ ಭಾಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬುಧವಾರ ಮುಳುಗಡೆಯಾಗಿದೆ.
ಸೇತುವೆ ಜೊತೆಗೆ ಸುಮಾರು ಅರ್ಧ ಕಿಲೋ ಮೀಟರ್ ನಷ್ಟು ದೂರದ ರಸ್ತೆಯವರೆಗೆ ನೀರು ಆವರಿಸಿಕೊಂಡಿದ್ದು ಕುಂಡಲ ಸೇರಿದಂತೆ ಕುರಾವಲಿ, ಕೆಲೋಲಿ, ಘಟ್ಟಾವ ಸೇರಿದಂತೆ ಹಲವು ಸಣ್ಣ ಪುಟ್ಟ ಹಳ್ಳಿಗಳಿಗೆ ಸಂಪರ್ಕ ರಸ್ತೆ ಇಲ್ಲದೆ ಜನರು ಸಂಚಾರಕ್ಕೆ ಪರದಾಡುವಂತಾಗಿದೆ.
ಪ್ರತಿ ಬುಧವಾರ ಸಂಜೀವಿನಿ ಸೇವಾ ಟ್ರಸ್ಟ್ ವತಿಯಿಂದ ಕುಂಡಲ್ ಭಾಗಕ್ಕೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದ ಸಂಚಾರಿ ಆಂಬುಲೆನ್ಸ್ ಸೇತುವೆ ಮೇಲೆ ನೀರು ತುಂಬಿದ್ದರಿಂದ ಮರಳಿತು.
ಪ್ರತಿ ವರ್ಷವೂ ಮಳೆಗಾಲದಲ್ಲಿ ಎರಡು ಮೂರು ಬಾರಿ ಕುಂಡಲ ಸೇತುವೆ ಮುಳುಗಡೆಯಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಕೆಪಿಸಿ ವತಿಯಿಂದ ಕುಂಬಾರವಾಡ ಗ್ರಾಮ ಪಂಚಾಯಿತಿಗೆ ದೋಣಿಯನ್ನು ಒದಗಿಸಲಾಗಿದ್ದು ಬುಧವಾರ ಜನರಿಗೆ ಅವಶ್ಯಕ ಸಂಚಾರಕ್ಕೆ ದೋಣಿ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.