ಕಾರವಾರ: ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮ ಪಂಚಾಯಿತಿಯ ಕನಕನಹಳ್ಳಿಯ ಮನೆಯೊಂದರ ಅಂಗಳದಿಂದ ಅಡಿಕೆ ಚೀಲಗಳನ್ನು ಕಳವು ಮಾಡಿದ ಆರೋಪಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಹಳವಳ್ಳಿ ಮಳಲಗಾಂವ್ನವರಾದ ಕೃಷ್ಣ ಸಿದ್ದಿ (19) ಹಾಗೂ ರವಿಚಂದ್ರ ಸಿದ್ದಿ (19) ಆರೋಪಿಗಳಾಗಿದ್ದಾರೆ. ಅವರೊಂದಿಗೆ, ಕಾನೂನಿನ ಜೊತೆ ಸಂಘರ್ಷಕ್ಕೀಡಾಗಿರುವ ಬಾಲಕನನ್ನೂ ವಶಕ್ಕೆ ಪಡೆದಿದ್ದಾರೆ. ಎರಡು ಚೀಲಗಳಲ್ಲಿ ತುಂಬಿಡಲಾಗಿದ್ದ ಸುಮಾರು ₹ 60 ಸಾವಿರ ಮೌಲ್ಯದ 120 ಕೆ.ಜಿ ಚಾಲಿ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನುಅವರಿಂದ ಜಪ್ತಿ ಮಾಡಿದ್ದಾರೆ.
ಮಾರಾಟಕ್ಕೆಂದು ಚೀಲಗಳಲ್ಲಿ ತುಂಬಿಡಲಾಗಿದ್ದ ಅಡಿಕೆಯನ್ನು ಯಾರೋ ಕಳವು ಮಾಡಿದ್ದಾಗಿ ಕೃಷಿಕ ಅವಧಿಯಲ್ಲಿ ಮಹಾಬಲೇಶ್ವರ ಭಟ್ ಅಂಕೋಲಾ ಪೊಲೀಸರಿಗೆ ದೂರು ನೀಡಿದ್ದರು. ಇನ್ಸ್ಪೆಕ್ಟರ್ ಸಂತೋಷ ಶೆಟ್ಟಿ ನೇತೃತ್ವದಲ್ಲಿ
ಪಿ.ಎಸ್.ಐ. ಪ್ರವೀಣಕುಮಾರ.ಆರ್ ಹಾಗೂ ಮಹಾಂತೇಶ ಬಿ.ವಿ, ಸಿಬ್ಬಂದಿ ಸುಬ್ರಾಯ ಭಟ್, ಸಚಿನ್ ನಾಯಕ, ಪರಮೇಶ ಎಸ್, ಶೇಖರ ಸಿದ್ದಿ, ಶ್ರೀಕಾಂತ ಕಟಬರ, ಮಂಜುನಾಥ ಲಕ್ಮಾಪುರ, ಜಗದೀಶ ನಾಯ್ಕ ಕಾರ್ಯಾಚರಣೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.