ADVERTISEMENT

‘ಅಂಗನವಾಡಿ ಕೇಂದ್ರದ ಮಕ್ಕಳಲ್ಲಿ ಚರ್ಮ ರೋಗ ಸಮಸ್ಯೆ’

ಕೇಂದ್ರಗಳಿಗೆ ಭೇಟಿ ನೀಡಿದ ಬಗ್ಗೆ ರಿಜಿಸ್ಟರ್‌ನಲ್ಲಿ ನಮೂದಿಸಲು ಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 12:25 IST
Last Updated 5 ಜುಲೈ 2018, 12:25 IST
ಕಾರವಾರದ ತಾಲ್ಲೂಕು ಪಂಚಾಯ್ತಿಯಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಪುರುಷೋತ್ತಮ ಗೌಡ, ಆನಂದಕುಮಾರ್, ಪ್ರಮೀಳಾ ನಾಯ್ಕ, ರವೀಂದ್ರ ಪವಾರ್ ಇದ್ದಾರೆ
ಕಾರವಾರದ ತಾಲ್ಲೂಕು ಪಂಚಾಯ್ತಿಯಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಪುರುಷೋತ್ತಮ ಗೌಡ, ಆನಂದಕುಮಾರ್, ಪ್ರಮೀಳಾ ನಾಯ್ಕ, ರವೀಂದ್ರ ಪವಾರ್ ಇದ್ದಾರೆ   

ಕಾರವಾರ:‘ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಲ್ಲಿ ಚರ್ಮ ರೋಗಗಳ ಸಮಸ್ಯೆ ಕಂಡು ಬರುತ್ತಿವೆ. ಅವರ ಆರೋಗ್ಯ ತಪಾಸಣೆಗೆ ತೆರಳುವ ವೈದ್ಯರು ಕೇಂದ್ರಕ್ಕೆ ಭೇಟಿ ನೀಡಿರುವ ಬಗ್ಗೆ ಅಲ್ಲಿನ ರಿಜಿಸ್ಟರ್‌ನಲ್ಲಿ ನಮೂದಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದಕುಮಾರ್ ಸೂಚಿಸಿದರು.

ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ವರದಿ ಪರಿಶೀಲಿಸಿ ಅವರು ಮಾತನಾಡಿದರು. ‘ಪರೀಕ್ಷೆಗೆ ತೆರಳಿದ ವೈದ್ಯರು ಅಂಗನವಾಡಿ ಕೇಂದ್ರದಲ್ಲಿನ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಜತೆಗೆ, ಮಕ್ಕಳಿಗೆ ನೀಡಲಾಗುವ ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆಯೂ ಉಲ್ಲೇಖಿಸಬೇಕು’ ಎಂದು ತಾಕೀತು ಮಾಡಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಸೂರಜ ನಾಯ್ಕ ಮಾತನಾಡಿ, ‘ಗ್ರಾಮೀಣ ಭಾಗಗಳಿಗಿಂತ ನಗರ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ನಗರದಲ್ಲಿ ನೀರು ನಿಲ್ಲುತ್ತಿರುವುದರಿಂದ ಡೆಂಗಿಯಂಥ ರೋಗಗಳು ಹರಡುವ ಸಾಧ್ಯತೆ ಇದ್ದು, ನಗರಸಭೆಯ ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.

ADVERTISEMENT

‘ಹಳಗಾದ ಅಗಳಿ, ಕಾತ್ನೆಯಲ್ಲಿ ವಿದ್ಯುತ್‌ ಸಂಪರ್ಕಕ್ಕಾಗಿ ಮರದ ಕಂಬಗಳನ್ನು ಹಾಕಲಾಗಿದೆ. ಮಳೆಗಾಲ ಆಗಿರುವುದರಿಂದ ಈ ಕಂಬಗಳಿಂದ ಅನಾಹುತಗಳು ಉಂಟಾಗುವ ಆತಂಕವಿದೆ. ಈ ಬಗ್ಗೆ ಗ್ರಾಮಸಭೆಗಳಲ್ಲಿ ಚರ್ಚೆಯೂ ಆಗಿದೆ. ಹೀಗಾಗಿ, ಅಲ್ಲಿ ಅವಶ್ಯವಿರುವ ನಾಲ್ಕು ವಿದ್ಯುತ್ ಕಂಬಗಳ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಅಧ್ಯಕ್ಷೆ ಪ್ರಮೀಳಾ ನಾಯ್ಕ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷಣ ಇಲಾಖೆಯ ಅಧಿಕಾರಿ ಉಮೇಶ್ ನಾಯ್ಕ, ಇದೇ 17ರಿಂದ 22ರ ವರೆಗೆ ಶಾಲೆಗಳಲ್ಲಿ ವನಮಹೋತ್ಸವ ಸಪ್ತಾಹವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ‘ಹಳಗಾದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ. ಅದನ್ನು ದುರಸ್ತಿ ಮಾಡಿಸಿಕೊಡಬೇಕು. ಘಟಕ ಸ್ಥಾಪನೆಯಾದಾಗಿನಿಂದ ಬಳಕೆ ಆಗಿಲ್ಲ’ ಎಂದು ಪ್ರಮೀಳಾ ನಾಯ್ಕ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗೆ ತಿಳಿಸಿದರು.

ಉಪಾಧ್ಯಕ್ಷ ರವೀಂದ್ರ ಪವಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.