ಕಾರವಾರ: ಮಳೆಗಾಲ ಸಮೀಪಿಸಿದ ಬೆನ್ನಲ್ಲೇ ತೋಟಗಾರಿಕೆ ಬೆಳೆಗಳ ಸಸಿಗಳನ್ನು ಸಸ್ಯಪಾಲನಾ ಕ್ಷೇತ್ರಗಳಲ್ಲಿ ಬೆಳೆಸಿ, ಹಂಚಿಕೆಗೆ ಸಜ್ಜುಗೊಳ್ಳಲಾಗಿದೆ.
ಕಾರವಾರ ತಾಲ್ಲೂಕಿನ ತೊಡೂರು, ಅಂಕೋಲಾ ತಾಲ್ಲೂಕಿನ ಬಾಸಗೋಡ, ಹಿಚ್ಕಡ, ಶಿರಸಿಯ ತೆರಕನಳ್ಳಿ ಮತ್ತು ತೋಟಗಾರಿಕೆ ಇಲಾಖೆ ಕಚೇರಿಯ ಆವರಣ, ಯಲ್ಲಾಪುರದ ಹಿತ್ತಲಕಾರಗದ್ದೆ, ಹಳಿಯಾಳದ ಬಾಣಸಗೇರಿ, ಮುಂಡಗೋಡದ ಬಾಚಣಕಿ, ಸಿದ್ದಾಪುರದ ಹೊಸೂರು, ಜೊಯಿಡಾ ತಾಲ್ಲೂಕಿನ ರಾಮನಗರ, ಭಟ್ಕಳ ತಾಲ್ಲೂಕಿನ ಬೆಳಕೆ, ಕುಮಟಾ ಪಟ್ಟಣದಲ್ಲಿರುವ ಸಸ್ಯಪಾಲನಾ ಕೇಂದ್ರಗಳಲ್ಲಿ ಈ ಬಾರಿ 3.46 ಲಕ್ಷ ಸಸಿಗಳನ್ನು ತೋಟಗಾರಿಕಾ ಇಲಾಖೆಯ ಸಸ್ಯಪಾಲನಾ ವಿಭಾಗ ಬೆಳೆಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಸಸಿಗಳನ್ನು ಬೆಳೆಸಿದ ಪ್ರಮಾಣ 50 ಸಾವಿರದಷ್ಟು ಇಳಿಕೆಯಾಗಿದೆ. ಒಟ್ಟಾರೆ ಸಸಿಗಳ ಪೈಕಿ ಅಡಿಕೆ ಸಸಿಗಳನ್ನು ಬೆಳೆಸುವ ಪ್ರಮಾಣ ಏರಿಕೆಯಾಗಿದ್ದು, ಕಾಳುಮೆಣಸು ಪ್ರಮಾಣ ಗಣನೀಯ ಇಳಿಕೆಯಾಗಿದೆ. ಒಟ್ಟಾರೆ ಸಸಿಗಳಲ್ಲಿ ಶೇ 43.33ರಷ್ಟು ಅಡಿಕೆ ಸಸಿಗಳನ್ನೇ ಬೆಳೆಸಿದ್ದು, ಎಲ್ಲ 11 ಸಸ್ಯಪಾಲನಾ ಕ್ಷೇತ್ರಗಳಲ್ಲಿಯೂ ಸಸಿಗಳು ಲಭ್ಯ ಇವೆ.
‘ಸಸ್ಯಪಾಲನಾ ಕ್ಷೇತ್ರಗಳಲ್ಲಿ ರೈತರ ಬೇಡಿಕೆ ಆಧರಿಸಿ ಸಸಿಗಳನ್ನು ಬೆಳೆಸಲಾಗುತ್ತದೆ. ಹಿಂದಿನ ವರ್ಷದಲ್ಲಿ ಹೆಚ್ಚು ಮಾರಾಟವಾದ ಸಸಿಗಳ ಬೆಳೆಸುವ ಪ್ರಮಾಣ ತುಸು ಹೆಚ್ಚಿಸಲಾಗುತ್ತದೆ. ಉಳಿಕೆಯಾದ ಸಸಿಗಳಿದ್ದರೆ ಅವುಗಳನ್ನು ಆರೈಕೆ ಮಾಡಿಟ್ಟು, ಪ್ರಸಕ್ತ ವರ್ಷಕ್ಕೆ ಹಂಚಿಕೆ ಮಾಡಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಾಮಚಂದ್ರ ಮಡಿವಾಳ ತಿಳಿಸಿದರು.
‘ಜಿಲ್ಲೆಯಲ್ಲಿ ಅಡಿಕೆ ಬೆಳೆ ಪ್ರದೇಶವೇ ಹೆಚ್ಚಿರುವ ಕಾರಣಕ್ಕೆ, ತೋಟಗಳ ವಿಸ್ತರಣೆ ಹೆಚ್ಚುತ್ತಿರುವ ಕಾರಣಕ್ಕೆ ಸಹಜವಾಗಿ ಅಡಿಕೆ ಸಸಿಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ, ಅವುಗಳನ್ನು ಬೆಳೆಸುವ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರಮುಖ ಬೆಳೆಗಳಾದ ಕಾಳು ಮೆಣಸು, ತೆಂಗು ಮತ್ತು ಗೇರು ಸಸಿಗಳನ್ನೂ ಅಗತ್ಯಕ್ಕೆ ತಕ್ಕಷ್ಟು ಬೆಳೆಸಿದ್ದೇವೆ’ ಎಂದು ವಿವರಿಸಿದರು.
‘ಸಸಿಗಳನ್ನು ಪಾಲಿಹೌಸ್ನಲ್ಲಿ ಬೆಳೆಸಲಾಗುತ್ತದೆ. ಅವುಗಳು ರೋಗಬಾಧೆಗೆ ತುತ್ತಾಗುವ ಪ್ರಮಾಣವೂ ಕಡಿಮೆ. ಖಾಸಗಿ ನರ್ಸರಿಗಳಿಗೆ ಹೋಲಿಸಿದರೆ ಕಡಿಮೆ ದರಕ್ಕೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ. ನೇರವಾಗಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಮೂಲಕ ತೋಟಗಾರಿಕೆ ಇಲಾಖೆ ಖರೀದಿಸಿ ರೈತರಿಗೆ ಉಚಿತವಾಗಿ ನೀಡುವ ಸೌಲಭ್ಯವೂ ಇದೆ’ ಎಂದು ಮಾಹಿತಿ ನೀಡಿದರು.
ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಸಿಗಳ ವಿತರಣೆ ಪ್ರಕ್ರಿಯೆ ಆರಂಭಗೊಳ್ಳಲಿದೆರಾಮಚಂದ್ರ ಮಡಿವಾಳ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.