ADVERTISEMENT

ಮುಂಡಗೋಡ | ಸನವಳ್ಳಿ ಜಲಾಶಯದ ನೀರು ಅರಣ್ಯದ ಪಾಲು

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 6:26 IST
Last Updated 20 ಜುಲೈ 2023, 6:26 IST
ಮುಂಡಗೋಡ ತಾಲ್ಲೂಕಿನ ಗಡಿಭಾಗದಲ್ಲಿ ಸನವಳ್ಳಿ ಜಲಾಶಯಕ್ಕೆ ಹರಿದು ಬರಬೇಕಾಗಿದ್ದ ಮಳೆಯ ನೀರು ಕಾಲುವೆ ಒಡೆದು ಅರಣ್ಯದೊಳಗೆ ಹರಿಯುತ್ತಿರುವುದು
ಮುಂಡಗೋಡ ತಾಲ್ಲೂಕಿನ ಗಡಿಭಾಗದಲ್ಲಿ ಸನವಳ್ಳಿ ಜಲಾಶಯಕ್ಕೆ ಹರಿದು ಬರಬೇಕಾಗಿದ್ದ ಮಳೆಯ ನೀರು ಕಾಲುವೆ ಒಡೆದು ಅರಣ್ಯದೊಳಗೆ ಹರಿಯುತ್ತಿರುವುದು   

ಮುಂಡಗೋಡ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಆಗುವ ಸನವಳ್ಳಿ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ.

ಜಲಾಶಯಕ್ಕೆ ಮಳೆಯ ನೀರು ಹರಿಸುವ ಪೂರಕ ಕಾಲುವೆಗಳ ಅಸಮರ್ಪಕ ನಿರ್ವಹಣೆಯಿಂದ ಮಳೆಯ ನೀರು ಜಲಾಶಯ ಸೇರದೇ, ಅರಣ್ಯದಲ್ಲಿ ಹರಿದು ಹಳ್ಳ ಸೇರುತ್ತಿದೆ.

ಶಿಗ್ಗಾವಿ ತಾಲ್ಲೂಕಿನ ಗಡಿ ಭಾಗದಲ್ಲಿ ಸುರಿಯುವ ಮಳೆಯ ನೀರು, ತಾಲ್ಲೂಕಿನ ಸನವಳ್ಳಿ ಜಲಾಶಯಕ್ಕೆ ಸೇರುತ್ತದೆ. ದೋಣಿ ಹಳ್ಳದ ಮೂಲಕ ನೀರು ಜಲಾಶಯ ಸೇರುವಂತೆ ಮಾಡಲು, ತಾಲ್ಲೂಕಿನ ಗಡಿಭಾಗದ ಅರಣ್ಯದಲ್ಲಿ ಕಾಲುವೆ ನಿರ್ಮಿಸಲಾಗಿದೆ.

ADVERTISEMENT

ಬಾಂದಾರದಲ್ಲಿ ಸೇರುವ ನೀರು ಅಲ್ಲಿಂದ ಕಾಲುವೆ ಮೂಲಕ ಜಲಾಶಯ ಸೇರಬೇಕು. ಆದರೆ, ಬಾಂದಾರದಿಂದ ಬಿದ್ದ ನೀರು, ಜಲಾಶಯ ಸೇರುತ್ತಿಲ್ಲ. ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿರುವುದು, ಹೂಳು ತುಂಬಿಕೊಂಡಿದೆ. ಇದರಿಂದಾಗಿ ನೀರು ಸರಾಗವಾಗಿ ಹರಿಯುತ್ತಿಲ್ಲ.

 ಎರಡು ದಿನಗಳಿಂದ ಶಿಗ್ಗಾವಿ ಗಡಿಭಾಗದಲ್ಲಿ ರಭಸದ ಮಳೆ ಸುರಿಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಬಾಂದಾರದಲ್ಲಿ ಸಂಗ್ರಹಗೊಳ್ಳುತ್ತಿದೆ. ಆದರೆ, ಜಲಾಶಯ ಸೇರಲು ಸಾಕಷ್ಟು ಅಡೆತಡೆಗಳಿರುವುದರಿಂದ ಅರಣ್ಯದಲ್ಲಿ ಹರಿಯುತ್ತಿದೆ.

ʼಈ ವರ್ಷ ಸನವಳ್ಳಿ ಜಲಾಶಯ  ಬರಿದಾಗುವ ಹಂತಕ್ಕೆ ಬಂದಿತ್ತು. ಅಷ್ಟರಲ್ಲಿಯೇ ಉತ್ತಮ ಮಳೆಯಾಗುತ್ತಿದ್ದು, ನೀರನ್ನು ಜಲಾಶಯಕ್ಕೆ ಹರಿದು ಬರುವಂತೆ ಮಾಡಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆʼ ಎಂದು ಸನವಳ್ಳಿಯ ರೈತ ರಾಜು ಗುಬ್ಬಕ್ಕನವರ್‌ ಆರೋಪಿಸಿದರು.

‘ಮಳೆಯ ನೀರನ್ನು ವ್ಯರ್ಥ ಮಾಡುವುದು ಸರಿಯಲ್ಲ. ಸಂಬಂಧಿಸಿದ ಇಲಾಖೆಯವರು ಕೂಡಲೇ ಕ್ರಮ ಕೈಗೊಂಡು ಸನವಳ್ಳಿ ಜಲಾಶಯಕ್ಕೆ ಸರಾಗವಾಗಿ ನೀರು ಹರಿದುಬರುವಂತೆ ಕ್ರಮ ಕೈಗೊಳ್ಳಬೇಕುʼ ಎಂದು ರೈತ ಮಂಜುನಾಥ ಆಗ್ರಹಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.