ಕಾರವಾರ: ‘ಇಡೀ ಜಿಲ್ಲೆಗೆ ಕಲಾವಿದರ ವೇದಿಕೆ ಬೇಕು. ಅದು ಜಾತಿ, ಧರ್ಮಗಳನ್ನು ಮೀರಿದ ಸಂಘವಾಗಿರಬೇಕು. ಮುಂಬರುವ ದಿನಗಳಲ್ಲಿ ಅದು ಸಾಕಾರಗೊಳ್ಳಲಿ’ ಎಂದು ಹಿರಿಯ ಸಾಹಿತಿ ವಿಷ್ಣು ನಾಯ್ಕ ಆಶಿಸಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ರಂಗಭೂಮಿ ಕಲಾವಿದರ ವೇದಿಕೆಯ ಉದ್ಘಾಟನೆ ಮತ್ತು ನಾಟಕ ಪ್ರದರ್ಶನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಲಾವಿದನಾದವನು ತನ್ನ ಕಲೆಯಿಂದ ಗುರುತಿಸಿಕೊಳ್ಳುತ್ತಾನೆ. ವ್ಯಕ್ತಿತ್ವ ಹಾಗೂ ಸಹಾನುಭೂತಿಯಿದ್ದರೆ ಆತ ಬೆಳೆಯುತ್ತಾನೆ. ಜಿಲ್ಲೆಯಲ್ಲಿ ರಂಗಭೂಮಿಯನ್ನುಬೆಳೆಸುವ ಕಾರ್ಯವಾಗಲಿ’ ಎಂದು ಹಾರೈಸಿದರು.
‘ಉಳಿದ ಕ್ಷೇತ್ರಗಳಿಗೆಹೋಲಿಸಿದರೆರಂಗಭೂಮಿಯು ಅಧೋಗತಿಯತ್ತ ಸಾಗುತ್ತಿರುವುದು ಕಾಣುತ್ತಿದೆ. ಯಕ್ಷಗಾನ, ಪತ್ರಿಕಾರಂಗವೂ ಕೂಡ ಇದಕ್ಕೆ ಹೊರತಾಗಿಲ್ಲ. ನಮ್ಮನ್ನು ಬೆಳೆಸಿದ, ಮೌಲ್ಯವನ್ನು ಕಾಪಾಡಿಕೊಂಡು ಬಂದಿರುವ ಕ್ಷೇತ್ರಗಳು ಅವನತಿಯತ್ತ ಸಾಗಿದೆ.ಶ್ರಮದ ಆರಾಧನೆಯನ್ನು ಹೇಗೆ ಮಾಡುತ್ತೇವೆಯೋ ಮನರಂಜನೆಯನ್ನು ಆರಾಧಿಸುವ ಅಭಿವ್ಯಕ್ತಿ ನಮ್ಮಲ್ಲಿರಬೇಕು. ಮೌಲ್ವಿಕ ಕ್ಷೇತ್ರಗಳು ನಶಿಸುವ ಸಂದರ್ಭದಲ್ಲಿ ಪರ್ಯಾಯ ಸಂಸ್ಕ್ರತಿ ರೂಪಿಸುವ ವೇದಿಕೆ ರೂಪುಗೊಳ್ಳಬೇಕಿದೆ’ ಎಂದು ಹೇಳಿದರು.
ಸಾಧಕರಿಗೆ ಸನ್ಮಾನ:ದಶಕಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು, 1000ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದವರು, ಹಲವಾರು ನಾಟಕಗಳನ್ನು ರಚಿಸಿ ನಿರ್ದೇಶಿಸಿದವರನ್ನು ಸನ್ಮಾನಿಸಲಾಯಿತು.
ಉಮೇಶ ಅಂಚೇಕರ್, ಆನಂದು ಹರಿಕಂತ್ರ, ಮಾರುತಿ ಬಾಡಕರ್, ಶಿವಾನಂದ ಕದಂ, ಚಂದ್ರಕಾಂತ ನಾಯ್ಕ, ವಿಷ್ಣು ರಾಣೆ ಕಿನ್ನರ, ಅಮವಾಸ್ಯ ದೇವಾ ಗೌಡ, ವಾಮನ ಗಣೇಶ ನಾಯ್ಕ, ಆರ್.ಎನ್.ನಾಯ್ಕ, ರಮೇಶ ಗುನಗಿ, ಚಂದ್ರಕಲಾ ಗುನಗಿ, ವಿದ್ಯಾ ನಾಯ್ಕ ಅವರನ್ನು ಪುರಸ್ಕರಿಸಲಾಯಿತು.
ಗಜಾನನ ನಾಯ್ಕ ದೇವಳಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ಆರ್.ಪ್ರಕಾಶ, ಇಬ್ರಾಹಿಂ ಕಲ್ಲೂರು, ಜಾರ್ಜ್ ಫರ್ನಾಂಡೀಸ್, ಗಣಪತಿ ಮಾಂಗ್ರೆ, ಮಾರುತಿ ಬಾಡಕರ್ ಇದ್ದರು. ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕೃಷ್ಣಾನಂದ ನಾಯ್ಕ ಸ್ವಾಗತಿಸಿದರು. ಗಣೇಶ ಬಿಷ್ಠಣ್ಣನವರ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.