ಸಿದ್ದಾಪುರ: ತಾಲ್ಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಎದುರು ಹಾಗೂ ಮುಠ್ಠಳ್ಳಿಯಲ್ಲಿ ಅಳವಡಿಸಿದ್ದ ಸೋಲಾರ ಲೈಟ್ನ ಬ್ಯಾಟರಿಯನ್ನು ಕಳ್ಳರು ಕದ್ದೊಯ್ದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ವಾಜಗದ್ದೆಯಲ್ಲಿ ಅಳವಡಿಸಿದ್ದ ಹಾಗೂ ಮುಠ್ಠಳ್ಳಿಯಲ್ಲಿ ಅಳವಡಿಸಿದ್ದ ಸೋಲಾರ್ ಲೈಟಿನ ಬ್ಯಾಟರಿಯನ್ನು ಬಿಳಿಯ ಬಣ್ಣದ ಸ್ಕೂಟರ್ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ಕದ್ದೊಯ್ದಿದ್ದು ಸ್ಪಷ್ಟವಾಗಿ ಕಂಡುಬರುತ್ತಿದೆ.
ಈ ಕುರಿತು ಈಗಾಗಲೇ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದವರು ಹಾಗೂ ಮುಠ್ಠಳ್ಳಿಯ ಸಾರ್ವಜನಿಕರು ಗ್ರಾಮ ಪಂಚಾಯಿತಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿದ್ದಾಪುರ ಪೊಲೀಸರು ವಾಜಗದ್ದೆ ಹಾಗೂ ಮುಠ್ಠಳ್ಳಿಗೆ ಬಂದು ಸ್ಥಳಪರಿಶೀಲಿಸಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಪರಿಶೀಲಿಸಿದ್ದಾರೆ.
ವಾಜಗದ್ದೆ ಹಾಗೂ ಮುಠ್ಠಳ್ಳಿಯಲ್ಲಿ ಸೋಲಾರ್ ಬ್ಯಾಟರಿ ಕಳವಾಗಿರುವ ಕುರಿತು ಗ್ರಾಮ ಪಂಚಾಯಿತಿಯಿಂದ ಬುಧವಾರ ಪೊಲೀಸ್ ದೂರು ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ದಾರ್ಥ ಗೌಡರ್ ಮುಠ್ಠಳ್ಳಿ ಹಾಗೂ ಪಿಡಿಒ ರಾಜೇಶ ನಾಯ್ಕ ತಿಳಿಸಿದ್ದಾರೆ.
ಹಾರ್ಸಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಶೋಕ ಪ್ರೌಢಶಾಲೆಯ ಹತ್ತಿರ ಎರಡು ಕಡೆ, ಹೊನ್ನೆಹದ್ದ ಹಾಗೂ ಮಾನಿಹೊಳೆ ಬಸ್ ನಿಲ್ದಾಣದ ಸಮೀಪ ಅಳವಡಿಸಿದ್ದ ಸೋಲಾರ್ ಲೈಟಿನ ಬ್ಯಾಟರಿಯನ್ನು ಈ ಹಿಂದೆ ಯಾರೋ ಕಳವು ಮಾಡಿಕೊಂಡು ಹೋಗಿದ್ದು ಈ ಕುರಿತು ಗ್ರಾಮ ಪಂಚಾಯಿತಿಯವರು ಪೊಲೀಸರಿಗೆ ದೂರು ನೀಡಿದ್ದರೂ ಏನು ಪ್ರಯೋಜನವಾಗಿಲ್ಲ. ಪೊಲೀಸರು ರಾತ್ರಿ ಗಸ್ತು ಕಾಯಾಚರಣೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ನಡೆಯುವ ಕಳವನ್ನು ತಡೆಯಬೇಕು ಎಂದು ವಾಜಗದ್ದೆ, ಮುಠ್ಠಳ್ಳಿ, ಹಾರ್ಸಿಕಟ್ಟಾ ಸುತ್ತಮುತ್ತಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.