ಗೋಕರ್ಣ: ಇಲ್ಲಿನ ಮೇನ್ ಬೀಚ್ ಬಳಿ ಸಮುದ್ರದಲ್ಲಿ ಗುರುವಾರ ಸಂಜೆ ಈಜಲು ಹೋದ ಮೂವರು ಪ್ರವಾಸಿಗರು ಅಲೆಯ ರಭಸಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
ಮೃತರನ್ನು ಬೆಂಗಳೂರಿನ ಹೆಬ್ಬಗೋಡಿ ತಿರುಪಾಳ್ಯದ ಸುಮಾ (22), ತಿಪ್ಪೇಸ್ವಾಮಿ ಹಮ್ಯ ನಾಯಕ್ (21) ಹಾಗೂ ರವಿಕುಮಾರ.ಸಿ (40) ಎಂದು ಗುರುತಿಸಲಾಗಿದೆ. ಸಿದ್ದರಾಜು (35) ಹಾಗೂ ಶ್ವೇತಾ ದೊಡ್ಡಯ್ಯ (33) ಅವರನ್ನು ರಕ್ಷಿಸಲಾಗಿದೆ.
ಎಲ್ಲರೂ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 15 ಮಂದಿ ಜೊತೆಯಾಗಿ ಬಂದಿದ್ದು, ಏಳು ಜನ ಈಜಲು ನೀರಿಗೆ ಇಳಿದಿದ್ದರು. ಅವರಲ್ಲಿ ಐವರು ಅಲೆಯ ಹೊಡೆತಕ್ಕೆ ಸಿಲುಕಿದ್ದರು. ಇದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ಕೂಡಲೇ ಸಮುದ್ರಕ್ಕೆ ಜಿಗಿದರು. ಐವರನ್ನೂ ನೀರಿನಿಂದ ಹೊರಗೆಳೆದು ತಂದರು. ಆದರೆ, ದುರದೃಷ್ಟವಶಾತ್ ಮೂವರು ಮೃತಪಟ್ಟರು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಗದೀಶ ನಾಯ್ಕ ಕೂಡಲೇ ಸ್ಥಳಕ್ಕೆ ಬಂದು ಪರೀಕ್ಷಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ. ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.