ಕಾರವಾರ: ‘ಸಾಧನೆಯು ಕೇವಲ ಶ್ರಮಜೀವಿಗಳ, ಕ್ರಿಯಾಶೀಲರ ಸ್ವತ್ತು. ವಿದ್ಯಾರ್ಥಿಗಳು ಅಂತಹ ಕಠಿಣ ಪರಿಶ್ರಮದಿಂದ ಉನ್ನತವಾದುದನ್ನು ಸಾಧಿಸಬೇಕು’ ಎಂದು ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಕಿವಿಮಾತು ಹೇಳಿದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿ.ಯು ಪರೀಕ್ಷೆಗಳಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆನಗರಸಭೆ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸತತ ಪ್ರಯತ್ನವೇ ಸಾಧನೆಯ ರಹಸ್ಯ. ಸಿಕ್ಕಿರುವ ಯಶಸ್ಸನ್ನು ಮುಂದುವರಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವಂತಾಗಲಿ’ ಎಂದು ಹಾರೈಸಿದರು.
ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ ಮಾತನಾಡಿ, ‘ಜಗತ್ತನ್ನು ತಿಳಿಯಲು ಶಿಕ್ಷಣವೆಂಬ ಒಂದೇ ಅಸ್ತ್ರ ಸಾಕು. ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ಸಮಾಜಕ್ಕೆ ಒಳಿತು ಮಾಡಿ’ ಎಂದರು.
ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ಮಾತನಾಡಿ, ‘ವಿದ್ಯಾರ್ಥಿಗಳು ಹಿಂಜರಿಕೆಯ ಸ್ವಭಾವವನ್ನು ತೊರೆದು ಮುನ್ನುಗ್ಗಿದಾಗ ಯಶಸ್ಸು ಸಿಗುತ್ತದೆ. ಬಹಳ ಅಧಿಕಾರಿಗಳು, ಗಣ್ಯ ವ್ಯಕ್ತಿಗಳು ಸರ್ಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲಿ ಹಾಗೂ ಕಲಾ ವಿಭಾಗದಲ್ಲಿಯೇ ಅಧ್ಯಯನ ಮಾಡಿದ್ದಾರೆ. ಅವರು ಉನ್ನತ ಸಾಧನೆ ಮಾಡಿದ್ದಾರೆ. ಅಂಥ ಸಾಧಕರ ಯಶಸ್ಸು ನಿಮಗೆ ಸ್ಫೂರ್ತಿಯಾಗಲಿ’ ಎಂದು ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ ಹಾಗೂ ನಗರಸಭೆ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.